ಧಾರವಾಡ: ಕನ್ನಡ ನಾಡು- ನುಡಿಗೆ ಕುವೆಂಪು ಅವರ ಕೊಡುಗೆ ಅಪಾರವಾದುದ್ದು. ಅವರ ವಿಶ್ವಮಾನವ ಸಂದೇಶವು ಜಗತ್ತಿನ ಮನುಕುಲದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಹೇಳಿದರು.
ನಗರದ ಬೇಂದ್ರೆ ಭವನದಲ್ಲಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಧಾರವಾಡ ಕಟ್ಟೆ ವತಿಯಿಂದ ಈಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕುವೆಂಪು ಕಾವ್ಯದಲ್ಲಿ ಭಾಷಾ ಸಂವಿಧಾನ’ ವಿಷಯದ ಕುರಿತು ಅವರು ಮಾತನಾಡಿದರು.
ಕುವೆಂಪು ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ವಿಶಾಲ ಮನೋಭಾವ ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಮುಂದಿನ ತಲೆಮಾರಿಗೆ ಕನ್ನಡವನ್ನು ತಲುಪಿಸುವ ಜವಾಬ್ದಾರಿ ಎಲ್ಲರ ಹೆಗಲ ಮೇಲಿದೆ. ಭಾಷೆ ಎನ್ನುವುದು ಪರಿಸರ ಸ್ನೇಹಿಯಾಗಿರಬೇಕು. ನಮ್ಮ ಬದುಕಿನ ಮನೆಗೆ ಬಾಗಿಲಂತಿರಬೇಕು ಎಂದರು.
ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ಮಲೆನಾಡಿನ ಯಜಮಾನಿಕೆ, ಶ್ರೀಮಂತಿಕೆಯನ್ನು ಅಲ್ಲಿನ ಮೂಢನಂಬಿಕೆ, ಅಲ್ಲಿರುವ ಹೊಟ್ಟೆಬಾಕರ ಅನೇಕ ಹುಳುಕನ್ನು ತಮ್ಮ ಕಾವ್ಯದಲ್ಲಿ ತೋರಿಸಿಕೊಟ್ಟವರು ಕುವೆಂಪು. ಹೆಣ್ಣಿನ ಬಗೆಗೆ, ಪರಿಸರದ ಕಾಳಜಿ, ಅಲ್ಲಿನ ಧೋರಣೆ, ಕಂದಾಚಾರ, ಇನ್ನಿತರ ಅನೇಕ ವಿಚಾರಗಳನ್ನು ತಮ್ಮ ಕಾವ್ಯದ ಮೂಲಕ ಜನರ ಕಣ್ಣು ತೆರೆಸುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಹೇಳಿದರು.
ಧಾರವಾಡ ಕಟ್ಟೆಯ ಗೌರವಾಧ್ಯಕ್ಷ ಬಸವರಾಜ ಡೋಣೂರ ಮಾತನಾಡಿ, ಅಖಂಡತೆ ಎನ್ನುವುದು ಮುಖ್ಯ. ಭಾರತ, ಕರ್ನಾಟಕ ಬೇರೆ ಎಂದು ಗ್ರಹಿಸದೆ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗಿ ನೋಡಿ, ಎರಡಕ್ಕೂ ಧಕ್ಕೆಯಾಗದಂತೆ ನಮ್ಮ ಭಾಷೆಯನ್ನು ಬಳಕೆ ಮಾಡಬೇಕು ಎಂದರು.
ಬೇಂದ್ರೆ ಟ್ರಸ್ಟ್ನ ಅಧ್ಯಕ್ಷ ಡಿ.ಎಂ.ಹಿರೇಮಠ, ಮುಕುಂದ ಲಮಾಣಿ, ಪ್ರೊ.ಸುರೇಶ ಗುದಗನವರ, ಶ್ರೀನಿವಾಸ ವಾಡಪ್ಪಿ, ಬಿ.ಎಸ್.ಶಿರೋಳ, ಎಸ್.ಎಸ್.ಬಂಗಾರಿಮಠ, ಕಲ್ಲಪ್ಪ, ಮೇಘಾ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.