ADVERTISEMENT

ಧಾರವಾಡ | ನಿರ್ವಹಣೆ, ಮೂಲಸೌಕರ್ಯ ಕೊರತೆ: ಅವಳಿನಗರದ ರಂಗಮಂದಿರ ದುಸ್ಥಿತಿ

ಬಿ.ಜೆ.ಧನ್ಯಪ್ರಸಾದ್
Published 21 ಅಕ್ಟೋಬರ್ 2024, 6:14 IST
Last Updated 21 ಅಕ್ಟೋಬರ್ 2024, 6:14 IST
<div class="paragraphs"><p>ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿರುವ ಸವಾಯಿ ಗಂಧರ್ವ ಕಲಾಮಂದಿರ</p></div>

ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿರುವ ಸವಾಯಿ ಗಂಧರ್ವ ಕಲಾಮಂದಿರ

   

ಧಾರವಾಡ: ಅವಳಿನಗರಗಳ ಬಹುತೇಕ ರಂಗಮಂದಿರಗಳು ದುಃಸ್ಥಿತಿಯಲ್ಲಿವೆ. ಇದು ನಾಟಕ ಪ್ರದರ್ಶನ, ರಂಗ ತಾಲೀಮು ಮೊದಲಾದ ಚಟುವಟಿಕೆಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಸಾಂಸ್ಕೃತಿಕ ನಗರವೆಂದು ಕರೆಯುವ ಧಾರವಾಡದಲ್ಲಿ ಈಗ ಕೆಲವೇ ರಂಗಮಂದಿರಗಳಲ್ಲಿ ರಂಗಭೂಮಿ ಚಟುವಟಿಕೆಗಳು ನಡೆಯುತ್ತವೆ. ಮೂಲಸೌಕರ್ಯಗಳ ಕೊರತೆ ಮತ್ತು ಅವ್ಯವಸ್ಥೆಗಳಿಂದ ನಲುಗಿರುವ ರಂಗತಾಣಗಳಿಗೆ ಕಾಯಕಲ್ಪಿಸಲು ಸಂಬಂಧಪಟ್ಟವರು ಕ್ರಮವಹಿಸಿಲ್ಲ.

ADVERTISEMENT

ಧಾರವಾಡದಲ್ಲಿ ರಂಗಾಯಣ ಇದ್ದರೂ ಅನುದಾನ ಕೊರತೆ, ಸವಲತ್ತುಗಳ ಕೊರತೆಯಿಂದಾಗಿ ರಂಗಚಟುವಟಿಕೆಗಳು ಸೊರಗಿವೆ. ಬಹುತೇಕ ರಂಗಮಂದಿರಗಳಲ್ಲಿ ಬೆಳಕು, ಧ್ವನಿ ‌ವ್ಯವಸ್ಥೆ ಸಹಿತ ಸುಸಜ್ಜಿತ ಸಕಲ ಸೌಕರ್ಯಗಳು ಇಲ್ಲ.

ಇದ್ದೂ ಇಲ್ಲದಂತಾದ ಕಲಾಭವನ:

ಕಡಪಾ ಮೈದಾನದಲ್ಲಿನ ಡಾ.ಮಲ್ಲಿಕಾರ್ಜುನ ಮನ್ಸೂರ ಕಲಾಭವನ ದುಃಸ್ಥಿತಿಯಲ್ಲಿದೆ. ನಗರದ ಹೃದಯ ಭಾಗದಲ್ಲಿರುವ ಈ ಕಟ್ಟಡ ಇದ್ದೂ ಇಲ್ಲದಂತಾಗಿದೆ. ಈ ಕಟ್ಟಡದ ಒಂದು ಪಾರ್ಶ್ವದಲ್ಲಿ ಪಾಲಿಕೆಯ ವಲಯ–12 ಕಚೇರಿ ಇದೆ.

ಕಲಾ ಭವನದಲ್ಲಿ ಕಾರ್ಯಚಟುವಟಿಕೆಗಳು ಸ್ಥಗಿತವಾಗಿ ದಶಕ ಕಳೆದರೂ ಈವರೆಗೆ ಕಾಯಕಲ್ಪ ಕಲ್ಪಿಸಿಲ್ಲ. ಧಾರವಾಡದಲ್ಲಿ ಪಾಲಿಕೆ ಕಚೇರಿ ಪಕ್ಕದಲ್ಲೇ ಕಲಾ ಭವನ ಇದೆ. ಭವನದ ಒಳಗೆ‌ ಮತ್ತು ಹೊರಗೆ ಪ್ಲಾಸ್ಟಿಕ್‌ ಪೊಟ್ಟಣ, ಕಸ ಬಿದ್ದಿದೆ. ಕಟ್ಟಡದ ಗೋಡೆಗಳ ಮಗ್ಗುಲಿನ ಜಾಗ, ಪ್ರವೇಶ ದ್ವಾರದ ಮೆಟ್ಟಿಲುಗಳಲ್ಲಿ ಬೀಡಾಡಿ ಜಾ‌ನುವಾರುಗಳು ‌ಇರುತ್ತವೆ. ಕಟ್ಟಡ ಪ್ರದೇಶವು ಅಕ್ರಮ ಚಟುವಟಿಕೆಗಳ (ಮದ್ಯ ಸೇವನೆ, ಧೂಮಪಾನ...) ತಾಣವಾಗಿದೆ.

ಮದ್ಯ ಸೇವಿಸಿ ಕೆಲವರು ಕಟ್ಟಡದ ಬಾಗಿಲ ಮುಂಭಾಗದಲ್ಲೇ ಪವಡಿಸಿರುತ್ತಾರೆ. ಭವನದ ಆವರಣದಲ್ಲಿ ವಸ್ತು ಪ್ರದರ್ಶನ–ಮಾರಾಟ ಮೇಳಗಳು ನಡೆಯುತ್ತವೆ. ಪಾಲಿಕೆಯ ಕಸ ಸಂಗ್ರಹ ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ.

ಬಯಲು ರಂಗಮಂದಿರ ಸ್ಥಿತಿ ಶೋಚನೀಯ:

ನಗರದ ರಂಗಾಯಣದ ಆವರಣದಲ್ಲಿರುವ ಬಯಲು ರಂಗಮಂದಿರವು ನಿರ್ವಹಣೆ ಕೊರತೆಯಿಂದಾಗಿ ಶೋಚನೀಯ ಸ್ಥಿತಿಗೆ ತಲುಪಿದೆ. ಪ್ರದರ್ಶನಗಳು ಜರುಗದೆ ಬಹುದಿನಗಳಾಗಿವೆ.

ಆಸನ ಕಟ್ಟೆಗಳು ಬಹುತೇಕ ಪಾಚಿಕಟ್ಟಿವೆ. ಆಸನ ಕಟ್ಟೆ ಮೇಲಿನ ಭಾಗದಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದಿವೆ. ಕಸಕಡ್ಡಿ ಬಿದ್ದಿವೆ. ಪೊದೆಗಳು ಹಾವು, ಹುಳಹುಪ್ಪಟೆಗಳ ತಾಣಗಳಾಗಿವೆ.

ನಾಟಕ ಪ್ರದರ್ಶನ ವೇದಿಕೆ ಭಾಗದ ಶೆಡ್‌ ಮಳಿಗೆಯಲ್ಲಿ ಹಲಗೆಗಳು, ಸ್ಟ್ಯಾಂಡ್‌ಗಳು ಮೊದಲಾದವನ್ನು ತುಂಬಲಾಗಿದೆ. ಪ್ರವೇಶ ದ್ವಾರದ (ಗೇಟಿನ ಪಕ್ಕ) ಗೋಡೆ ಪಕ್ಕದ ರಂಗಜಗುಲಿಯಲ್ಲಿ ನಿರುಪಯುಕ್ತ ಚೀಲಗಳು, ಕಬ್ಬಿಣದ ಸರಳುಗಳು, ಹರಿದ ಬ್ಯಾನರ್‌ಗಳು, ಗೂಟದ ಕಟ್ಟಿಗೆಗಳನ್ನು ಗುಡ್ಡೆ ಹಾಕಲಾಗಿದೆ.

ಬಯಲು ರಂಗಮಂದಿರ ಜಾಗವು ಪಾಲಿಕೆ ಒಡೆತನದಲ್ಲಿದೆ. ಪಾಲಿಕೆಯು ರಂಗಾಯಣಕ್ಕೆ ಜಾಗವನ್ನು ಲೀಸ್‌ಗೆ ನೀಡಿದೆ. ರಂಗಚಟುವಟಿಕೆಗಳಿಗೆ ಸೌಲಭ್ಯಗಳನ್ನು ಕಲ್ಪಿಸಿ, ಸುಸಜ್ಜಿತಗೊಳಿಸಲು ಸರ್ಕಾರವು ಕ್ರಮ ವಹಿಸಬೇಕು ಎಂಬುದು ಕಲಾಭಿಮಾನಿಗಳು, ಕಲಾವಿದರ ಮೊರೆ.

ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿನ ವೇದಿಕೆಯಲ್ಲಿ (ಒಳಾಂಗಣ) ನಾಟಕ ಪ್ರದರ್ಶನಗಳು ನಡೆಯುತ್ತವೆ. ಈ ವೇದಿಕೆ ಸಣ್ಣ ಮಂದಿರದಲ್ಲಿ ಇದೆ. ಇಲ್ಲಿ ಸಭಾ ಕಾರ್ಯಕ್ರಮಗಳು ಜರುಗುತ್ತವೆ.

ರಂಗಮಂದಿರ ಅವ್ಯವಸ್ಥೆ:

ಸಾಧನಾ ಕೇರಿಯ ಕೆರೆ ಅಂಗಳದಲ್ಲಿನ ಬಯಲು ರಂಗಮಂದರಿವು ಅವವ್ಯವಸ್ಥೆಗಳ ತಾಣವಾಗಿದೆ. ಈ ರಂಗಮಂದಿರದಲ್ಲೂ ರಂಗಚಟುವಟಿಕೆಗಳು ಜರುಗದೆ ಬಹಳ ದಿನಗಳಾಗಿವೆ.

ಆಸನದ ಕಟ್ಟೆಗಳಲ್ಲಿ ಹುಲ್ಲು, ಸಸ್ಯಗಳು ಬೆಳೆದಿವೆ. ವೇದಿಕೆ ಗೋಡೆ ಕೆಲವೆಡೆ ಪಾಚಿಗಟ್ಟಿದೆ. ಈ ಜಾಗವು ಉದ್ಯಾನಕ್ಕೆ ಭೇಟಿ ನೀಡುವ ಜೋಡಿಗಳು, ಯುವಕಯುವತಿಯರ ‘ಹರಟೆ’ ತಾಣವಾಗಿದೆ.

‘ಈ ಬಯಲುಮಂದಿರದಲ್ಲಿ ಇಲ್ಲಿ ವ್ಯವಸ್ಥಿತ ಸೌಕರ್ಯಗಳು ಇಲ್ಲ. ಕೋವಿಡ್‌ ನಂತರ ಈ ಬಯಲು ರಂಗ‌ಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯುತ್ತಿಲ್ಲ’ ಎಂದು ಉದ್ಯಾನದ ಸಿಬ್ಬಂದಿಯೊಬ್ಬರು ತಿಳಿಸಿದರು.

ವೇದಿಕೆ ಗೋಡೆಯು ಶಿಥಿಲವಾಗಿದೆ. ಗೋಡೆ ಹಿಂಬದಿ ನಿರ್ಮಿಸಿರುವ ಕೊಠಡಿಯ ಚಾವಣಿಗೆ ಅಳವಡಿಸಿರುವ ಕೆಲವು ಹಂಚುಗಳು ಚೂರಾಗಿವೆ. ಮಳೆಯಾದಾಗ ನೀರು ಸೋರಿಕೆಯಾಗುತ್ತದೆ. ಇಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಘಟಕವು ಹಾಳಾಗಿದೆ.

‘ದ.ರಾ.ಬೇಂದ್ರೆ‌ ಟ್ರಸ್ಟ್‌ ಕಟ್ಟಡ ಹಿಂಭಾಗದಲ್ಲಿ ಚಿಕ್ಕದೊಂದು ಬಯಲು ರಂಗವೇದಿಕೆ ಇದೆ. ಈ ವೇದಿಕೆ ಬಳಕೆಯಾಗುತ್ತಿಲ್ಲ.

‘ಈ ರಂಗವೇದಿಕೆಯಲ್ಲಿ ಚಟುವಟಿಕೆಗಳು ನಡೆಯುವುದಿಲ್ಲ. ಟ್ರಸ್ಟ್‌ಗೆ ₹ 5 ಲಕ್ಷ ಅನುದಾನ ಮಂಜೂರಾಗಿದೆ. ಕಚೇರಿ ಕೊಠಡಿ ನಿರ್ಮಾಣ, ಇತರ ಅಭಿವೃದ್ಧಿ ಕಾಮಗಾರಿ ನಡೆಯಲಿದೆ’ ಎಂದು ಟ್ರಸ್ಟ್‌ ನೌಕರರೊಬ್ಬರು ತಿಳಿಸಿದರು.

ಕರ್ನಾಟಕ ವಿದ್ಯಾಲಯ (ಕೆಸಿಡಿ) ಆವರಣದ ‘ಸೃಜನ– ಅಣ್ಣಾಜಿರಾವ್‌ ಸಿರೂರ’ ರಂಗಮಂದಿರ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ನಾಟಕ ಪ್ರದರ್ಶನಗಳು ನಡೆಯುತ್ತವೆ. ಸೃಜನ ರಂಗಮಂದಿರವನ್ನು ದಾಸ ಟ್ರಸ್ಟ್‌ನವರು ನಿರ್ವಹಣೆ ಮಾಡುತ್ತಾರೆ.

‘ಸೃಜನ ರಂಗಮಂದಿರ (ಒಳಾಂಗಣ) ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಪಕ್ಕದಲ್ಲಿನ ಆಂಪಿ ಥಿಯೇಟರ್‌ ಅನ್ನು ಅಭಿವೃದ್ಧಿಪಡಿಸಲಾಗುವುದು. ಸರ್ಕಾರವು ಬೆಳಕು, ಧ್ವನಿ ವ್ಯವಸ್ಥೆ ನಿರ್ವಹಣೆ ನಿಟ್ಟಿನಲ್ಲಿ ತಾಂತ್ರಿಕ ಸಿಬ್ಬಂದಿ ನೇಮಕ ಮಾಡಬೇಕು’ ಎಂದು ದಾಸ ಟ್ರಸ್ಟ್‌ನ ಖಜಾಂಚಿ ಸಮೀರ ಜೋಶಿ ತಿಳಿಸಿದರು.

‘ರಂಗಶಾಲೆ ಆರಂಭಿಸಬೇಕು, ಕಲಾವಿದರ ಪಗಾರ ₹ 20 ಸಾವಿರಕ್ಕೆ ಹೆಚ್ಚಿಸಬೇಕು, ಕಲಾವಿದರ ಕಲ್ಯಾಣ ನಿಧಿ ಸ್ಥಾಪಿಸಬೇಕು, ವಸತಿಗೆ ಕಟ್ಟಡ ನಿರ್ಮಾಣ ಮಾಡಬೇಕು, ತಾಲೀಮು ಕೊಠಡಿಗಳನ್ನು ನಿರ್ಮಿಸಬೇಕು, ರಂಗ ಪ್ರಾಧಿಕಾರ ಸ್ಥಾಪಿಸಬೇಕು’ ಎಂದು ಕಲಾವಿದರು ಒತ್ತಾಯಿಸುತ್ತಾರೆ.

ಧಾರವಾಡದ ಕಡಪಾ ಮೈದಾನದ ಕಲಾ ಭವನದ ಮೆಟ್ಟಿಲುಗಳ ಮೇಲೆ ನಾಯಿಗಳು
ಧಾರವಾಡದ ಕಲಾ ಭವನದ ಮುಂಭಾಗದ ಆವರಣದಲ್ಲಿ ನಿಂತಿರುವ ಕಸ ಸಂಗ್ರಹ ವಾಹನಗಳು ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ
ಕಲಾ ಭವನ ಕಾಯಕಲ್ಪಕ್ಕೆ ₹ 70 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಕಾಮಗಾರಿ ಕಾರ್ಯಾದೇಶವನ್ನು ಶೀಘ್ರದಲ್ಲಿ ನೀಡಲಾಗುವುದು. ಬೇಂದ್ರೆ ಉದ್ಯಾನದಲ್ಲಿನ ಬಯಲು ರಂಗಮಂದಿರ ಪ್ರದೇಶದ ಅವ್ಯವಸ್ಥೆ ಸರಿಪಡಿಸಲು ಕ್ರಮ ವಹಿಸಲಾಗುವುದು.
ಡಾ.ಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಧಾರವಾಡದಲ್ಲಿ ನಾಟಕ ಪ್ರದರ್ಶನಕ್ಕೆ ರಂಗಮಂದಿರ ಬಾಡಿಗೆ ( ₹ 15 ಸಾವಿರದಿಂದ ₹ 20 ಸಾವಿರ) ದುಬಾರಿ ಇದೆ. ಸರ್ಕಾರವು ಸುಸಜ್ಜಿತ ಜಿಲ್ಲಾ ರಂಗಮಂದಿರವೊಂದನ್ನು ನಿರ್ಮಿಸಿ ಕಡಿಮೆ ಬಾಡಿಗೆ ನಿಗದಿಪಡಿ‌ಸಿದರೆ ನಾಟಕ ತಂಡಗಳಿಗೆ ಅನುಕೂಲವಾಗುತ್ತದೆ.
ಮಹದೇವ ಹಡಪದ ರಂಗಕರ್ಮಿ ಧಾರವಾಡ
ಸರ್ಕಾರವು ಕಲಾವಿದರನ್ನು ಗುರುತಿಸಿ ಮಾಸಿಕ ನೆರವು ನೀಡಬೇಕು. ಕೋವಿಡ್‌ ನಂತರ ಬಹಳಷ್ಟು ರಂಗಸಂಸ್ಥೆಗಳು ನಿಷ್ಕ್ರಿಯವಾಗಿವೆ. ಈ ರಂಗಸಂಸ್ಥೆಗಳನ್ನು ಸಕ್ರಿಯಗೊಳಿಸಿ ನಾಟಕ ಪ್ರದರ್ಶನಗಳನ್ನು ಹೆಚ್ಚು ಆಯೋಜಿಸಬೇಕು.
ಗೋಪಾಲ ಯಲ್ಲಪ್ಪ ಉಣಕಲ್‌ ಕಲಾವಿದ ಧಾರವಾಡ
‘ಬಯಲು ರಂಗಮಂದಿರ ರಂಗಾಯಣಕ್ಕೇ ಹಸ್ತಾಂತರಿಸಿ’
‘ಮಹನಾನಗರ ಪಾಲಿಕೆಯವರು ಬಯಲು ರಂಗಮಂದಿರ ಜಾಗವನ್ನು ರಂಗಾಯಣಕ್ಕೇ ಹಸ್ತಾಂತರಿಸಿದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸರ್ಕಾರ ಆ ಜಾಗವನ್ನು ರಂಗಾಯಣಕ್ಕೆ ನೀಡಿದರೆ ಅತ್ಯಾಧುನಿಕ ವ್ಯವಸ್ಥೆಗಳನ್ನು (ಬೆಳಕು ಧ್ವನಿವರ್ಧಕ ಕಾಲರ್‌ ಮೈಕ್‌...) ಕಲ್ಪಿಸಿ ಸುಸಜ್ಜಿತಗೊಳಿಸಿ ನಿಯಮಿತವಾಗಿ ನಾಟಕ ಪ್ರದರ್ಶನ ಆಯೋಜಿಸಲಾಗುವುದು. ರಂಗಾಯಣಕ್ಕೆ ವಾರ್ಷಿಕ ₹ 50 ಲಕ್ಷ ಅನುದಾನ ನೀಡುತ್ತಿದೆ. ಇಲ್ಲಿನ ನೌಕರರ ಸಂಬಳಕ್ಕೆ ₹ 59 ಲಕ್ಷ ‌ಬೇಕು. ಈ ಸಂಸ್ಥೆಗೆ ಸ್ವಂತ ಆದಾಯ ಇಲ್ಲ. ಈ ಕ್ಷೇತ್ರಕ್ಕೆ ಸಿಎಸ್‌ಆರ್‌ (ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ) ನಿಧಿ ನೀಡಲು ಕಂಪನಿಗಳು ಆಸಕ್ತಿ ತೋರಲ್ಲ. ಸರ್ಕಾರವು ರಂಗಾಯಣಕ್ಕೆ ಅನುದಾನವನ್ನು ₹ 2 ಕೋಟಿಗೆ ಹೆಚ್ಚಿಸಬೇಕು. ರಂಗಭೂಮಿ ಚಟುವಟಿಕೆಗಳಿಗೆ ಅನುದಾನ ಒದಗಿಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು’ ಎಂದು ಮನವಿ ಮಾಡಿದರು.
ಸುಸಜ್ಜಿತ ‘ಮಂದಿರ’ ಕೊರತೆ
ಹುಬ್ಬಳ್ಳಿ: ರಂಗಭೂಮಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾದ ಧಾರವಾಡದಿಂದ ಕೆಲವೇ ಕಿ.ಮೀ. ದೂರದಲ್ಲಿದ್ದರೂ ಹುಬ್ಬಳ್ಳಿಯಲ್ಲಿ ಸುಸಜ್ಜಿತ ರಂಗಮಂದಿರದ ಕೊರತೆ ಇದೆ. ಇದು ರಂಗಭೂಮಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಹುಬ್ಬಳ್ಳಿಯನ್ನು ಬಹುತೇಕ ದೂರವಾಗಿಸಿದೆ. ನಗರದ ಸವಾಯಿ ಗಂಧರ್ವ ಕಲಾಮಂದಿರ ಸಾಂಸ್ಕೃತಿಕ ಭವನ ಕನ್ನಡ ಭವನ ಹಾಗೂ ಟೌನ್‍ಹಾಲ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧೀನದಲ್ಲಿವೆ. ಸಾಂಸ್ಕೃತಿಕ ಭವನ ಹಾಗೂ ಟೌನ್‍ಹಾಲ್‍ ದುರಸ್ತಿಯಲ್ಲಿವೆ. ಸವಾಯಿ ಗಂಧರ್ವ ಕಲಾಮಂದಿರ ಹೊತುಪಡಿಸಿ ಉಳಿದೆಡೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವುದು ತೀರಾ ವಿರಳವಾಗಿದೆ. ಈ ಕಾರಣದಿಂದಲೇ ಯಾವುದೇ ಕಾರ್ಯಕ್ರಮ ಆಯೋಜಿಸಲು ಖಾಸಗಿ ಸಮುದಾಯ ಭವನಗಳನ್ನು ಆಶ್ರಯಿಸುವಂತಾಗಿದೆ. ‘ಸವಾಯಿ ಗಂಧರ್ವ ಹಾಲ್‍ಗೆ ದಿನದ ಬಾಡಿಗೆಯಾಗಿ ₹10 ಸಾವಿರ ಪಡೆಯುತ್ತಾರೆ. ಉಳಿದೆಡೆ ಸರಿಯಾದ ವ್ಯವಸ್ಥೆ ಇಲ್ಲ. ಹೆಚ್ಚು ಕಾರ್ಯಕ್ರಮಗಳು ನಡೆಯುತ್ತಿದ್ದ ಟೌನ್‍ಹಾಲ್‍ ದುರಸ್ತಿಯಲ್ಲಿದೆ. ಕಾರ್ಯಕ್ರಮಗಳನ್ನು ಆಯೋಜಿಸುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ಭವನಗಳಿಗೇ ಹೆಚ್ಚಿನ ದರ ನೀಡುವುದು ಹೊರೆಯಾಗಿದೆ. ಹಾಗಾಗಿ ಬಹುತೇಕರು ಅಲ್ಲಲ್ಲಿ ಇರುವ ಸಮುದಾಯ ಭವನಗಳಲ್ಲೇ ಕಾರ್ಯಕ್ರಮ ಆಯೋಜಿಸುತ್ತಾರೆ’ ಎನ್ನುತ್ತಾರೆ ಜಾನಪದ ತಜ್ಞ ರಾಮು ಮೂಲಗಿ. ‘ಸವಾಯಿ ಗಂಧರ್ವ ಹಾಲ್‍ನಲ್ಲಿ ಬೆಳಕು ಶಬ್ದದ ವ್ಯವಸ್ಥೆ ತಕ್ಕಮಟ್ಟಿದೆ. ಸಾಂಸ್ಕೃತಿಕ ಭವನ ಗೋದಾಮಿನಂತಾಗಿದೆ. ಕನ್ನಡ ಭವನ ದೂರದಲ್ಲಿದೆ. ಬೆಳಕು ಶಬ್ದದ ವ್ಯವಸ್ಥೆ ತಂತ್ರಜ್ಞರನ್ನು ನಿಯೋಜಿಸುವ ಕೆಲಸವಾಗಿಲ್ಲ. ಸಾಂಸ್ಕೃತಿಕ ಆಲೋಚನೆ ಅನುಭವ ಇರುವವರನ್ನು ಭವನಗಳ ನಿರ್ವಹಣೆಗೆ ನಿಯೋಜಿಸಬೇಕಿದೆ. ದಿನಕ್ಕೆ ದುಬಾರಿ ದರ ಪಡೆಯುವ ಬದಲು ಕಡಿಮೆ ದರ ನಿಗದಿಪಡಿಸಿದರೆ ವರ್ಷಪೂರ್ತಿ ಕಾರ್ಯಕ್ರಮ ನಡೆಯುತ್ತವೆ. ಸಾಂಸ್ಕೃತಿಕ ಕೇಂದ್ರಗಳನ್ನು ನಡೆಸುವ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು’ ಎಂದು ರಂಗಕರ್ಮಿ ಯಶವಂತ ಸರದೇಶಪಾಂಡೆ ತಿಳಿಸಿದರು.
‘ನಿರ್ವಹಣೆ; ಪಾಲಿಕೆ ಹೊಣೆ’
ಹುಬ್ಬಳ್ಳಿಯ ಸರ್ಕಾರಿ ಸಾಂಸ್ಕೃತಿಕ ಭವನಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿರ್ಮಾಣ ಮಾಡಿ ನಿರ್ವಹಣೆಗಾಗಿ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಧಾರವಾಡದ ಆಲೂರು ವೆಂಕಟರಾವ ಸಭಾಂಗಣ ರಂಗಾಯಣ ಬೇಂದ್ರ ಭವನವನ್ನು ಇಲಾಖೆಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಸರ್ಕಾರದ ಹಾಗೂ ಇತರೆ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ವರ್ಷದಲ್ಲಿ 15 ದಿನ ಉಚಿತವಾಗಿ ಭವನಗಳನ್ನು ಬಾಡಿಗೆ ಕೊಡಲು ಅವಕಾಶವಿದೆ. ಕುಮಾರ ಬೆಕ್ಕೇರಿ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಅಗತ್ಯ ವ್ಯವಸ್ಥೆ: ಭರವಸೆ
ಸವಾಯಿ ಗಂಧರ್ವ ಹಾಲ್‍ ಅನ್ನು ಸಮಿತಿ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ . ಕನ್ನಡ ಭವನ ಸಾಂಸ್ಕೃತಿಕ ಭವನವನ್ನು ಕಾರ್ಯಕ್ರಮಕ್ಕೆ ಬಾಡಿಗೆ ಕೇಳಿದವರಿಗೆ ಕೊಡುತ್ತೇವೆ. ಸಾಂಸ್ಕೃತಿಕ ಭವನದ ದುರಸ್ತಿಗೆ ಟೆಂಡರ್‌ ಆಗಿದೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಈ ಹಿಂದೆ ಅನುದಾನ ಬಾರದ ಕಾರಣಕ್ಕೆ ಟೌನ್‍ಹಾಲ್ ದುರಸ್ತಿ ತಡವಾಗಿದೆ. ಎಲ್ಲ ಭವನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ. ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು-ಧಾ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.