ADVERTISEMENT

ಇಂದು ಈ ಊರು, ನಾಳೆ ಮತ್ತೊಂದು ಊರು...: ಸಂಕಷ್ಟದಲ್ಲಿ ಅಲೆಮಾರಿಗಳ ಬದುಕು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 4:17 IST
Last Updated 27 ಅಕ್ಟೋಬರ್ 2024, 4:17 IST
ಹುಬ್ಬಳ್ಳಿ ಸಮೀಪದ ಆರ್‌ಟಿಒ ಕಚೇರಿಯ ಬಳಿ ರಸ್ತೆ ಬದಿಯಲ್ಲಿ ಅಲೆಮಾರಿ ಸಮುದಾಯದವರು ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕಾಗಿ ಪ್ರದರ್ಶಿಸಿರುವುದು
ಹುಬ್ಬಳ್ಳಿ ಸಮೀಪದ ಆರ್‌ಟಿಒ ಕಚೇರಿಯ ಬಳಿ ರಸ್ತೆ ಬದಿಯಲ್ಲಿ ಅಲೆಮಾರಿ ಸಮುದಾಯದವರು ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕಾಗಿ ಪ್ರದರ್ಶಿಸಿರುವುದು   

ಹುಬ್ಬಳ್ಳಿ: ‘ಇವತ್ತು ಈ ಊರು, ನಾಳೆ ಮತ್ತೊಂದು ಊರು. ನಮ್ಮಂತಹ ಅಲೆಮಾರಿಗಳಿಗೆ ಸ್ವಂತ ಜಾಗ, ಮನೆ ಎಂಬುದು ಇರುವುದಿಲ್ಲ. ಆಶ್ರಯ ಸಿಕ್ಕ ಕಡೆ ಉಳಿಯುತ್ತೇವೆ. ಕೆಲ ದಿನಗಳ ಬಳಿಕ ಮತ್ತೆ ಮುಂದಿನ ಊರಿಗೆ ಪ್ರಯಾಣಿಸುತ್ತೇವೆ. ಆಯಾ ಸಮಯಕ್ಕೆ ಸಿಗುವ ವಸ್ತುಗಳನ್ನು ಮಾರುತ್ತ ಬದುಕುತ್ತೇವೆ’

ತಮ್ಮ ದೈನಂದಿನ ಬದುಕನ್ನು ಹೀಗೆ ಸಂಕ್ಷಿಪ್ತವಾಗಿ ವಿವರಿಸಿದವರು ಮಲ್ಲಶೆಟ್ಟಿ. ಅಲೆಮಾರಿ ಸಮುದಾಯದ ಅವರು ಕುಟುಂಬ ಸದಸ್ಯರ ಜೊತೆಗೆ ಹುಬ್ಬಳ್ಳಿಯ ಆರ್‌ಟಿಒ ಕಚೇರಿ ಬಳಿ ತಾತ್ಕಾಲಿಕ ನೆಲೆ ಕಂಡುಕೊಂಡಿದ್ದಾರೆ. ಅಲ್ಲಿ ರಸ್ತೆ ಬದಿ ಅಲಂಕಾರಿಕ ವಸ್ತುಗಳನ್ನು ಮಾರುತ್ತಾರೆ. ಅವರೊಂದಿಗೆ 25ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದಾರೆ.

ಬೆಂಗಳೂರು ಸಮೀಪದ ರಾಮನಗರ ತಾಲ್ಲೂಕಿನ ಬಿಡದಿ ಊರಿನ ಈ ಅಲೆಮಾರಿ ಸಮುದಾಯದವರು ದೀರ್ಘ ಕಾಲ ಒಂದೇ ಕಡೆ ಉಳಿಯಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡುವುದರ ಜೊತೆಗೆ ಅಲಂಕಾರಿಕ ವಸ್ತುಗಳನ್ನು ಮಾರುತ್ತಾರೆ.

ADVERTISEMENT

‘ನಮ್ಮ ಪೂರ್ವಜರ ಕಾಲದಿಂದ ಸಣ್ಣಪುಟ್ಟ ಕೆಲಸಗಳನ್ನೇ ನಂಬಿದ್ದೇವೆ. ನಮ್ಮವರಲ್ಲಿ ಬಹುತೇಕ ಮಂದಿ ಅಕ್ಷರಸ್ಥರಲ್ಲ. ಕೆಲವರು ಕಾಲೇಜು ಹಂತದವರೆಗೆ ಓದಿದ್ದರೂ ಉದ್ಯೋಗ ಸಿಕ್ಕಿಲ್ಲ. ಆರ್ಥಿಕ ಸಂಕಷ್ಟದಲ್ಲೇ ಎಲ್ಲವನ್ನೂ ನಿಭಾಯಿಸಿಕೊಂಡು ಬದುಕು ನಡೆಸಿದ್ದೇವೆ. ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ನಂಬಿಕೆ ನಮ್ಮದು’ ಎಂದು ಮಲ್ಲಶೆಟ್ಟಿ ತಿಳಿಸಿದರು.

‘ಹಬ್ಬದ ಸಂದರ್ಭದಲ್ಲಿ ನಾವೇ ಪ್ಲಾಸ್ಟಿಕ್ ಹಾರ, ಬಾಗಿಲು ತೋರಣ ಸೇರಿ ಬಗೆಬಗೆಯ ವಸ್ತುಗಳನ್ನು ಸಿದ್ಧಪಡಿಸುತ್ತೇವೆ. 15 ವರ್ಷಗಳಿಂದ ಇದೇ ಕಾಯಕ ನೆಚ್ಚಿಕೊಂಡಿದ್ದೇವೆ. ದೀಪಾವಳಿ ಸಮೀಪಿಸುತ್ತಿದ್ದು, ನಾವು ಸಿದ್ಧಪಡಿಸಿದ ವಸ್ತುಗಳನ್ನು ಜನರು ಖರೀದಿಸುತ್ತಾರೆ. ಆಯಾ ದಿನದ ದುಡಿಮೆಯಿಂದ ನಮಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಪ್ಲಾಸ್ಟಿಕ್‌ ವಸ್ತುಗಳ ವ್ಯಾಪಾರಿ ಜಯಶ್ರೀ ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಹಿವಾಟು ಕೂಡ ಹೆಚ್ಚಾಗಿದ್ದು, ಬಹುತೇಕ ಮಂದಿ ಮೊಬೈಲ್‌ನಲ್ಲೇ ಬಗೆಬಗೆಯ ವಸ್ತುಗಳನ್ನು ಆಯ್ಕೆ ಮಾಡಿ ಖರೀದಿಸುತ್ತಾರೆ. ಇದರಿಂದ ನಾವು ಮಾರುವ ವಸ್ತುಗಳಿಗೆ ಬೇಡಿಕೆ ಕೊಂಚ ಕುಗ್ಗಿದೆ. ಆದರೂ ನಾವು ಕುಲಕಸುಬು ಬಿಡಲು ಆಗುವುದಿಲ್ಲ’ ಎಂದರು.

‘ನಮಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಸಿಗುವುದಿಲ್ಲ. ಜನರು ಆನ್‌ಲೈನ್‌ನಲ್ಲಿ ದುಬಾರಿ ಖರ್ಚು ಮಾಡಿ, ವಸ್ತುಗಳನ್ನು ಕೊಳ್ಳುವ ಬದಲು ನಾವು ಸಿದ್ಧಪಡಿಸಿದ ವಸ್ತುಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದು. ಮಾರಾಟದಿಂದ ಬರುವ ಆದಾಯದಿಂದ ನಾವು ಖುಷಿಯಿಂದ ದೀಪಾವಳಿ ಆಚರಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.