ADVERTISEMENT

ಧಾರವಾಡ | ಸುಳ್ಳು ಸುದ್ದಿ: ಕಣ್ಗಾವಲಿಗೆ ಉಸ್ತುವಾರಿ ಕೋಶ

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ: ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 15:14 IST
Last Updated 3 ಏಪ್ರಿಲ್ 2024, 15:14 IST
   

ಧಾರವಾಡ: ‘ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾನೂನುಬಾಹಿರ ಮತ್ತು ಸುಳ್ಳು ಸುದ್ದಿಗಳು ಹರಡುವುದನ್ನು ನಿಯಂತ್ರಿಸಲು ಜಿಲ್ಲಾ ಚುನಾವಣಾ ನಿಯಂತ್ರಣ ಕೇಂದ್ರದಲ್ಲಿ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಕೋಶ ತೆರೆಯಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

ವಿಷಯ ಪರಿಣಿತ ಅಧಿಕಾರಿಗಳ ನೇತೃತ್ವದಲಿ ಜಿಲ್ಲಾ ಸಾಮಾಜಿಕ ಮಾಧ್ಯಮ ಘಟಕವನ್ನು ರಚಿಸಲಾಗಿದೆ. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ, ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಾಪಕರು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ತಾಂತ್ರಿಕ ಸಮಾಲೋಚಕರು, ಶಿಕ್ಷಕರು ಸಹಿತ 20 ಮಂದಿ ತಂಡ ಕಾರ್ಯನಿರ್ವಹಿಸಲಿದೆ.

ಈ ಕೋಶವು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತದೆ. ಅಂತರ್ಜಾಲದಲ್ಲಿ ಪ್ರಕಟವಾಗುವ ಸುದ್ದಿಗಳು, ವಿದ್ಯಮಾನಗಳು ಮತ್ತು ಒಟಿಟಿ ಪ್ಲಾಟ್‍ಫಾರಂ (ಉತ್ಪ್ರೇಕ್ಷಿತ) ಸುದ್ದಿಗಳನ್ನು ಪರಿಶೀಲಿಸಲಿದೆ. ನೀತಿ ಸಂಹಿತೆ ಉಲಂಘಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕುವವರ ಮೇಲೆ ಈ ಕೋಶವು ನಿಗಾ ಇಡಲಿದೆ.

ADVERTISEMENT

ಫೇಸ್‍ಬುಕ್, ವಾಟ್ಸ್‌ ಆ್ಯಪ್, ಟ್ವಿಟ್ಟರ್‌(ಎಕ್ಸ್‌), ಟೆಲಿಗ್ರಾಂ, ಯೂಟ್ಯೂಬ್, ವೆಬ್ ಚಾನೆಲ್‍ ಸಹಿತ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಎಲ್ಲ ಬಗೆಯ ಸುದ್ಧಿ, ಆಡಿಯೊ ಮತ್ತು ವಿಡಿಯೊ ಸಂದೇಶಗಳ ಮೇಲೆ ಈ ಕೋಶವು ಕಣ್ಗಾವಲು ಇಡಲಿದೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದು ಮತ್ತು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ, ಸಂಬಂಧಪಟ್ಟ ಸುದ್ದಿ ಅಥವಾ ವಿಡಿಯೊ ಪ್ರಸಾರದ ಮೂಲ ಪತ್ತೆ ಹಚ್ಚಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.