ADVERTISEMENT

ಸಾಮರಸ್ಯದ ನವಲಗುಂದ ನಾಗಲಿಂಗ ಅಜ್ಜ

‘ನಾಗಲಿಂಗ ಶ್ರೀ’ ಪ್ರಶಸ್ತಿಗೆ ಡಾ.ಸಿ.ಆರ್.ಚಂದ್ರಶೇಖರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 6:56 IST
Last Updated 9 ಜುಲೈ 2024, 6:56 IST
ಶ್ರೀ ಅಜಾತ ನಾಗಲಿಂಗ ಸ್ವಾಮಿ ಮಠದಲ್ಲಿರುವ ಬೈಬಲ್‍
ಶ್ರೀ ಅಜಾತ ನಾಗಲಿಂಗ ಸ್ವಾಮಿ ಮಠದಲ್ಲಿರುವ ಬೈಬಲ್‍   

ನವಲಗುಂದ: ಮನುಷ್ಯ ಮನುಷ್ಯರನ್ನು ದ್ವೇಷಿಸುವ ಇಂದಿನ ದಿನಮಾನದಲ್ಲಿ ಪಂಜಾಗಳನ್ನು ತಂದು ಮಠದ ಗವಿಯಲ್ಲಿಟ್ಟು, ಗದ್ದುಗೆಯ ಮೇಲೆ ಬೈಬಲ್ ಇಟ್ಟು ಪೂಜೆ ಮಾಡುವ ಮೂಲಕ ಹಿಂದೂ–ಮುಸ್ಲಿಂ, ಕ್ರೈಸ್ತರಲ್ಲಿ ಸಾಮರಸ್ಯ ಮೂಡಿಸುತ್ತಿರುವ ನವಿಲುಗುಂದ ಶ್ರೀ ಅಜಾತನಾಗಲಿಂಗಸ್ವಾಮಿ ಮಠ ಈ ನಾಡಿನಲ್ಲಿ ಬೇರೆಡೆ ಇಲ್ಲ.

ಹೌದು ಪಟ್ಟಣದ ಶ್ರೀ ಅಜಾತ ನಾಗಲಿಂಗ ಸ್ವಾಮಿ ಮಠದಲ್ಲಿ ಬೈಬಲ್‍ಗೆ ಮಳೆ ಜಡಿದು ರಂಧ್ರ  ಮಾಡಿ, ರಂಧ್ರ ಮುಚ್ಚಿದ ಮೇಲೆ ಮತ್ತೆ ಹುಟ್ಟಿ ಬರುವೇನೆಂದು ಹೇಳಿದ್ದ ಶ್ರೀಗಳು ಪವಾಡಗಳ ಮಹಿಮಾ ಪುರುಷರಾಗಿದ್ದಾರೆ. ಅವರು ಮಾಡಿದ ಹಲವಾರು ಲೀಲೆಗಳು ಭಕ್ತರು ಮನದಲ್ಲಿ ಇನ್ನೂ ಬೇರೂರಿವೆ. ಪಂಜಾಗಳನ್ನು ತಂದು ಮಠದ ಗವಿಯಲ್ಲಿಟ್ಟಿದ್ದು, ನಾರು ಹುಣ್ಣಿಗೆ ಕುಲುಮೆ ಚಿಕಿತ್ಸೆ ನೀಡಿದ್ದು ಪವಾಡ.

ಶ್ರೀ ಅಜಾತ ನಾಗಲಿಂಗ ಸ್ವಾಮಿಗಳು ಸಂಚರಿಸುತ್ತ ನವಲಗುಂದಕ್ಕೆ ಆಗಮಿಸಿದಾಗ ಅಜ್ಜನವರು ಇಲ್ಲಿಯ ಮೌನೇಶ ಗುಡಿಯಲ್ಲಿ ಜ್ವರಪೀಡಿತರಾಗಿ ಮಲಗಿದಾಗ ಆರೈಕೆ ಮಾಡಲು ಬಂದ ಸಮಗಾರ ಭೀಮವ್ವನ ಎದೆ ಹಾಲನ್ನು ಕುಡಿದು ಮಹಿಮೆ ಮೆರೆದರು. ಮಯೂರಗಿರಿಯಲ್ಲಿ ವಾಸಿಯಾಗಿ ಬರುವ ಭಕ್ತರ ಭವರೋಗ ನಿವಾರಣೆ ಮಾಡುತ್ತ, ಪರಮಹಂಸ ಸ್ವರೂಪನಾಗಿ, ಕಷ್ಟಅಂತ ಬಂದವರಿಗೆ ಕಾಮಧೇನುವಾಗಿ ವರವ ನೀಡುತ್ತಾ ಪವಾಡ ಮಹಿಮಾಪುರುಷನಾಗಿ ನೆಲೆಸಿದ್ದಾನೆ.

ADVERTISEMENT

ಸಿದ್ಡಾರೂಢ ಶ್ರೀ, ಮಡಿವಾಳೇಶ್ವರ, ಹೊಸಳ್ಳಿ ಬೂದೀಶ್ವರ, ಶಿಶುನಾಳ ಶರೀಫ್ ಶಿವಯೋಗಿಗಳ ಸಮಕಾಲೀನರಲ್ಲಿ ಬಬ್ಬರು ನಾಗಲಿಂಗಶ್ರೀಗಳು. 

ರಾಯಚೂರು ಜಿಲ್ಲೆಯ ಜಾವಳಗೇರಿ ಗ್ರಾಮದ ಮೌನಾಚಾರ್ಯ ಹಾಗೂ ನಾಗಮ್ಮ ದಂಪತಿ  ಮಗನಾಗಿ ಬೆಳೆದು ಬಾಲ್ಯದಲ್ಲಿಯೇ ವೈರಾಗ್ಯ ಹೊಂದಿ ಸನ್ಯಾಸಿ ದೀಕ್ಷೆ ಪಡೆದು, ಲೋಕದ ಕಲ್ಯಾಣಕ್ಕಾಗಿ ಮನೆ ಬಿಟ್ಟು ಬಂದು ನವಿಲುಗುಂದದಲ್ಲಿ ನೆಲೆಸಿದರು.

ಈಗಿನ ಪೀಠಾಧಿಪತಿಗಳಾದ ವೀರೇಂದ್ರ ಶ್ರೀಗಳು ಎಂ.ಎ ಸಂಸ್ಕೃತ ಹಾಗೂ ಯೋಗ ಪದವೀಧರರಾಗಿದ್ದು ಬಿಡುವಿನ ವೇಳೆಯಲ್ಲಿ ಶಾಲಾ ಮಕ್ಕಳಿಗೆ ಸಂಸ್ಕೃತ ಕಲಿಸುತ್ತಾರೆ. ಪ್ರೌಢಶಾಲೆ ಮತ್ತು ಐಟಿಐ ಕಾಲೇಜನ್ನು ನಡೆಸುತ್ತಿದ್ದು ಪ್ರಗತಿಪಥದಲ್ಲಿದ್ದು, ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾಗಿವೆ.

ಶ್ರೀಮಠದಲ್ಲಿ ನಿತ್ಯ ಅನ್ನದಾಸೋಹದ ಜೊತೆಗೆ ಯಾತ್ರಿ ನಿವಾಸಗಳ ವ್ಯವಸ್ಥೆಯಿದ್ದು, ಯೋಗ ಶಿಬಿರ, ಆರೋಗ್ಯ ಶಿಬಿರಗಳನ್ನು ವಿಶೇಷ ಸಂದರ್ಭಗಳಲ್ಲಿ ಆಯೋಜಿಸುತ್ತಾ ಬಂದಿದ್ದಾರೆ. ವಿವಿಧ ಜಾತಿಯ ಗೋವುಗಳನ್ನು ಸಾಕುವುದರ ಮೂಲಕ ಗೋಶಾಲೆ ನಡೆಸುತ್ತಿದ್ದಾರೆ.

ಪ್ರತಿನಿತ್ಯ ನಾಗಲಿಂಗಸ್ವಾಮಿಗಳ ಕರ್ತಗದ್ದುಗೆಗೆ ಪೂಜೆ, ಅಮಾವಾಸೆಯಂದು ನಾಗಲಿಂಗಾನುಭವ ಗೋಷ್ಠಿ ಎಂಬ ಆಧ್ಯಾತ್ಮಿಕ ಪ್ರವಚನ, ಸಂಗೀತ ಸೇವೆ ನಡೆಯುತ್ತವೆ. ಪ್ರತಿವರ್ಷ ನವರಾತ್ರಿಯಲ್ಲಿ ಶ್ರೀದೇವಿಪುರಾಣ ಪ್ರವಚನವೂ ಜರುಗುತ್ತಿದೆ.

ನವಲಗುಂದದಲ್ಲಿರುವ ಅಜಾತ ನಾಗಲಿಂಗ ಅಜ್ಜನ ಗದ್ದುಗೆ
ಶ್ರೀ ಮಠದಲ್ಲಿ ಭಕ್ತರ ಸೇವೆ ಅಗಾಧ. ಯಾವುದೇ ಜಾತಿ ಮತ ಭೇದವಿಲ್ಲದೆ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಸಕಲ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ
ಎನ್.ಎಚ್.ಕೋನರಡ್ಡಿ ಶಾಸಕರು
ಆರಾಧನ ಮಹೋತ್ಸವದಂದು 6 ಕ್ವಿಂಟಲ್‌ಗಿಂತ ಹೆಚ್ಚು ಗೋಧಿ ರವೆ ಬಳಸಿ ಮಾದಲಿಯಿಂದ ನಾಗಲಿಂಗಸ್ವಾಮಿಗಳ ಭವ್ಯ ಅಲಂಕೃತ ಮೂರ್ತಿ ತಯಾರಿಸಿ ಪ್ರಸಾದರೂಪದಲ್ಲಿ ಭಕ್ತರಿಗೆ ಹಂಚುತ್ತೇವೆ
ನಂದೀಶ ಸಂಗಟಿ ಶ್ರೀಮಠದ ಭಕ್ತ
ಜುಲೈ 1011 ರಂದು ಜಾತ್ರಾ ಮಹೋತ್ಸವ
ನವಲಗುಂದ: ಅಜಾತ ನಾಗಲಿಂಗ ಸ್ವಾಮಿಗಳ 143ನೇ ಆರಾಧನಾ ಮಹೋತ್ಸವ ಜುಲೈ 10 ಮತ್ತು 11 ರಂದು ಜರುಗಲಿದೆ. 11ರಂದು ಆರಾಧನೆ ಮಜಾರ ಪೂಜೆ ಸಂಜೆ ಹುಬ್ಬಳ್ಳಿಯ ದಯಾನಂದ ಗುರುಕುಲದ ಚಿದ್ರೂಪಾನಂದ ಸರಸ್ವತಿ ಶ್ರೀ ಖಜ್ಜಿಡೋಣಿಯ ಶಂಕರಾಚಾರ್ಯ ಅವಧೂತ ಆಶ್ರಮದ ಕೃಷ್ಣಾನಂದ ಶರಣರ ಸಾನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶಾಸಕ ಎನ್.ಎಚ್.ಕೋನರಡ್ಡಿ ಅಧ್ಯಕ್ಷತೆ ವಹಿಸುವರು. ಖ್ಮಾತ ಮನೋವೈದ್ಯ ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ ಅವರಿಗೆ ‘ನಾಗಲಿಂಗ ಶ್ರೀ ಪ್ರಶಸ್ತಿ ಪ್ರದಾನ’ ಹಾಗೂ ಧರ್ಮಸಭೆ ನಡೆಯಲಿದೆ. ಜುಲೈ 11 ಗುರುವಾರ ಬೆಳಿಗ್ಗೆ ಶಿರೋಳ ಗವಿಮಠದ ಅಭಿನವ ಯಚ್ಚರೇಶ್ವರ ಸ್ವಾಮೀಜಿ ಸಾನಿಧ್ಯ ಎನ್.ನಾಗೇಂದ್ರ ಸಮ್ಮುಖದಲ್ಲಿ ಸಂಗೀತಸೇವೆ ಸಂಜೆ ಪಲ್ಲಕ್ಕಿ ಹಾಗೂ ಮೇಣೆ ಉತ್ಸವ ಬಹು ವಿಜೃಂಭಣೆಯಿಂದ ಜರುಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.