ಹುಬ್ಬಳ್ಳಿ: ಬಿವಿಬಿ ಕಾಲೇಜು ಆವರಣದಲ್ಲಿ ಕೊಲೆಯಾದ ವಿದ್ಯಾರ್ಥಿನಿ ನೇಹಾ ಅವರ ಪೋಷಕರಾದ ನಿರಂಜನಯ್ಯ ಹಿರೇಮಠ ಮತ್ತು ಗೀತಾ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ಮನವಿ ಸಲ್ಲಿಸಿದರು.
ಬಿಜೆಪಿ ವಿಜಯ ಸಂಕಲ್ಪ ಸಮಾವೇಶದ ಸ್ಥಳದ ಬಳಿ ಭೇಟಿಯಾದ ಪೋಷಕರು, ‘ಹೆಣ್ಣುಮಕ್ಕಳ ಮೇಲೆ ನಡೆಯುವ ಇಂತಹ ಅಪರಾಧ ಕೃತ್ಯಗಳನ್ನು ತಡೆಯಲು ನೇಹಾ ಹೆಸರಿನಲ್ಲಿ ಕಾನೂನು ಜಾರಿಗೆ ತರಬೇಕು. ತನಿಖೆ ಬೇಗ ಪೂರ್ಣಗೊಳಿಸಿ, 120 ದಿನಗಳಲ್ಲಿ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದರು.
ಮನವಿಗೆ ಸ್ಪಂದಿಸಿದ ಶಾ, ‘ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿದೆ. ಆ ತನಿಖೆ ತೃಪ್ತಿಕರ ಆಗದಿದ್ದರೆ, ಸಿಬಿಐ ತನಿಖೆಗೆ ನೀವು ಒತ್ತಾಯಿಸಿ. ರಾಜ್ಯ ಸರ್ಕಾರವು ತನಿಖೆಯನ್ನು ಸಿಬಿಐಗೆ ಒಪ್ಪಿಸಿದರೆ, ನಾವು ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದರು.
‘ಮಗಳ ಸಾವಿಗೆ ಸಿಐಡಿ ತನಿಖೆಯಲ್ಲಿ ನ್ಯಾಯ ಸಿಗದಿದ್ದರೆ, ಸಿಬಿಐ ತನಿಖೆಗೆ ಒತ್ತಾಯಿಸುವೆ. ಅಮಿತ್ ಶಾ ಅವರ ಜೊತೆ 10 ನಿಮಿಷ ಚರ್ಚಿಸಿದ್ದು, ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ನಿರಂಜನಯ್ಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.