ನವಲಗುಂದ: ಪಟ್ಟಣದ ಬಸ್ ನಿಲ್ದಾಣ, ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ಗಳ ಬಳಕೆ ಎಗ್ಗಿಲ್ಲದೆ ನಡೆದಿದೆ. ವರ್ಷದ ಹಿಂದೆ ಜಿಲ್ಲಾ ಉಪವಿಭಾಗಾಧಿಕಾರಿಗಳು ತಹಶೀಲ್ದಾರ್ ಹಾಗೂ ಪುರಸಭೆ ಸಿಬ್ಬಂದಿ ದಾಳಿ ಮಾಡಿದ್ದಲ್ಲದೆ ದಂಡ ಪ್ರಯೋಗದಿಂದಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ವಿಪರೀತವಾಗಿದೆ.
ದಿನಸಿ, ಔಷಧ ಅಂಗಡಿ, ಬೇಕರಿಗಳು, ಚಿಲ್ಲರೆ ವ್ಯಾಪಾರ ಮಳಿಗೆ, ಹೂವು, ಹಣ್ಣು, ತರಕಾರಿ ಮಾರುಕಟ್ಟೆ, ಮಾಂಸ ಮಾರಾಟದ ಅಂಗಡಿಗಳು ಸೇರಿದಂತೆ ವಿವಿಧೆಡೆ ಪ್ಲಾಸ್ಟಿಕ್ ಕೈಚೀಲಗಳ ಬಳಕೆ ನಡೆಯುತ್ತಿದೆ.
ಗಾಂಧಿ ಮಾರುಕಟ್ಟೆಯಲ್ಲಿರುವ ಪುರಸಭೆ ಮಳಿಗೆಗಳಲ್ಲಿಯ ಸಗಟು ಅಂಗಡಿಗಳಲ್ಲಿ ಮಾಲೀಕರು ಯಾವುದೇ ಅಂಜಿಕೆಯಿಲ್ಲದೆ ಪ್ಲಾಸ್ಟಿಕ್ ಕೈಚೀಲ, ತಟ್ಟೆ, ಲೋಟ ಪ್ಲಾಸ್ಟಿಕ್ ಬ್ಯಾಗ್ಗಳನ್ನು ನೀಡುವುದು ಕಂಡುಬರುತ್ತಿದೆ.
‘ಮಾರುಕಟ್ಟೆಗೆ ಬಂದ ಯಾವುದೇ ಗ್ರಾಹಕನೂ ಕೈಯಲ್ಲಿ ಪ್ಲಾಸ್ಟಿಕ್ ಚೀಲ ಇರದೇ ಮನೆಯತ್ತ ಮುಖ ಮಾಡಲಾರ. ರಸ್ತೆ ಬದಿ ಹೂವು, ಹಣ್ಣಿನ ವ್ಯಾಪಾರಿಗಳು ಕೂಡ ಪ್ಲಾಸ್ಟಿಕ್ ಕವರ್ ಇಲ್ಲದೆ ಖರೀದಿಗೆ ಇಳಿಯಲಾರರು’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
‘ಪ್ಲಾಸ್ಟಿಕ್ ನೀಡದೆ ಹೋದರೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಅಂಗಡಿಯಲ್ಲಿ ಕೊಟ್ಟಿಲ್ಲ ಎಂದರೆ ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾರೆ. ಪ್ಲಾಸ್ಟಿಕ್ ನಿಷೇಧವಾಗಿದೆ ಎಂದು ಹೇಳಿದರೆ ಗಲಾಟೆ ಮಾಡಲು ಆರಂಭಿಸುತ್ತಾರೆ. ಪ್ಲಾಸ್ಟಿಕ್ ನೀಡಿದರೆ ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಪ್ಲಾಸ್ಟಿಕ್ ನಿಷೇಧ ಮತ್ತು ಅದರ ಬಳಕೆ ಅಪಾಯದ ಬಗ್ಗೆ ಜನರಿಗೆ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಗಾಂಧಿ ಮಾರುಕಟ್ಟೆ ವ್ಯಾಪಾರಿಗಳು ಹೇಳುತ್ತಾರೆ.
ಗ್ರಾಹಕರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವ ಕಾರಣ ಅವು ಮಳೆ ಬಂದಾಗ ಚರಂಡಿಯಲ್ಲಿ ನೀರು ತುಂಬಿ ಉಕ್ಕಿಹರಿಯಲು ಕಾರಣವಾಗುತ್ತದೆ. ಅಧಿಕಾರಿಗಳು ಗಮನ ಹರಿಸಬೇಕು
- ಚನ್ನಪ್ಪ ಕೆಸರಪ್ಪನವರ ಪರಿಸರ ಪ್ರೇಮಿ
ವಿವಿಧ ಬಗೆಯ ಪ್ಲಾಸ್ಟಿಕ್ಗಳ ಉತ್ಪಾದನೆ ಬಳಕೆ ನಿಷೇಧಿಸಿದೆ. ನಾವು ಹಲವು ಬಾರಿ ದಾಳಿ ಮಾಡಿ ವಶಪಡಿಸಿಕೊಂಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ
-ವೆಂಕಟೇಶ ನಾಗನೂರ್ ಮುಖ್ಯಾಧಿಕಾರಿ ಪುರಸಭೆ ನವಲಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.