ಕುಂದಗೋಳ: ‘ಬಿಜೆಪಿಯವರಿಗೆ ಸಿದ್ದರಾಮಯ್ಯನವರನ್ನು ಕಂಡರೇ ಹೊಟ್ಟೆಕಿಚ್ಚು. ನಮ್ಮ ಸರ್ಕಾರ ಇಂದು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ರೈತರ ಪರ ಸದಾಕಾಲ ನಿಲ್ಲುವ ಸರ್ಕಾರ ನಮ್ಮದು’ ಎಂದು ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಪಂಚಯೋಜನೆಗಳು ರಾಜ್ಯದ ಎಲ್ಲ ಬಡವರ ಮನೆ-ಮನ ತಲುಪಿವೆ. ಜಿಲ್ಲೆಯಲ್ಲಿ 4,04,848 ಗೃಹಲಕ್ಷ್ಮಿ, 4,74,548 ಗೃಹಜ್ಯೋತಿ ಮತ್ತು ರಾಜ್ಯದಲ್ಲಿ 150ಕೋಟಿ ಮಹಿಳೆಯರು ಶಕ್ತಿ ಯೋಜನೆ ಲಾಭ ಪಡೆದಿದ್ದಾರೆ. ನರೇಗಾ ಯೋಜನೆಯಡಿ ಕೋಟ್ಯಂತರ ಮಾನವ ದಿನಗಳ ಸೃಷ್ಟಿಸಿದ್ದೇವೆ’ ಎಂದು ಹೇಳಿದರು.
‘ದೇಶದಲ್ಲಿ ಲಕ್ಷಾಂತರ ಜನ ಕೋವಿಡ್ನಿಂದ ಸತ್ತರೂ ಆಸ್ಪತ್ರೆ ನಿರ್ಮಿಸುವ ಉಸಾಬರಿಗೆ ಹೋಗದ ಮೋದಿ ಗುಜರಾತನಲ್ಲಿ ಕೋಟ್ಯಂತರ ರೂಪಾಯಿ ಕರ್ಚು ಮಾಡಿ ಸ್ಟೇಡಿಯಂ, ಪುತ್ಥಳಿ ನಿರ್ಮಾಣ ಮಾಡಿದರು. ಬಿಜೆಪಿಯ ಅಡಳಿತದಲ್ಲಿರುವ ಯಾವ ರಾಜ್ಯ ಸರ್ಕಾರವು ಮಹಿಳೆಯರಿಗೆ ನೇರವಾಗಿ ಹಣದ ನೆರವು ನೀಡುವ ಧೈರ್ಯ ಮಾಡಲಿಲ್ಲ’ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಜೆ.ಆರ್, ಗೀತಾ ಸಿ.ಡಿ, ಮಾಜಿ ಸಂಸದ, ಐ.ಜಿ. ಸನದಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಇತರ ಅಧಿಕಾರಿಗಳು, ಕುಂದಗೋಳ ತಾಲ್ಲೂಕು ಕಾಂಗ್ರೆಸ್ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.