ADVERTISEMENT

ಹುಬ್ಬಳ್ಳಿ | ರೌಡಿಗಳ ಮನೆ ಮೇಲೆ ದಾಳಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 14:29 IST
Last Updated 2 ಜೂನ್ 2024, 14:29 IST
ಹುಬ್ಬಳ್ಳಿಯ ಉಣಕಲ್‌ ಬಳಿ ಇರುವ ರೌಡಿಯೊಬ್ಬರ ಮನೆ ಮೇಲೆ ಭಾನುವಾರ ವಿದ್ಯಾನಗರ ಠಾಣೆ ಪೊಲೀಸರು ದಾಳಿ ನಡೆಸಿ ಮಾಹಿತಿ ಪಡೆದರು
ಹುಬ್ಬಳ್ಳಿಯ ಉಣಕಲ್‌ ಬಳಿ ಇರುವ ರೌಡಿಯೊಬ್ಬರ ಮನೆ ಮೇಲೆ ಭಾನುವಾರ ವಿದ್ಯಾನಗರ ಠಾಣೆ ಪೊಲೀಸರು ದಾಳಿ ನಡೆಸಿ ಮಾಹಿತಿ ಪಡೆದರು   

ಹುಬ್ಬಳ್ಳಿ: ಅವಳಿ ನಗರದಲ್ಲಿ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಹಾಗೂ ಚುನಾವಣಾ ಮತ ಎಣಿಕೆ ಹಿನ್ನೆಲೆಯಲ್ಲಿ ಮುಂಜಾಗೃತೆಯಾಗಿ ಹಮ್ಮಿಕೊಂಡಿರುವ ರೌಡಿಗಳ ಮನೆ ಮೇಲಿನ ದಾಳಿಯನ್ನು ಪೊಲೀಸರು ಮುಂದುವರಿಸಿದ್ದು, ಭಾನುವಾರ ಬೆಳ್ಳಂಬೆಳಿಗ್ಗೆ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದರು.

ಉಣಕಲ್‌, ವಿದ್ಯಾನಗರ, ಸಾಯಿನಗರ, ಟಿಂಬರ್‌ ಯಾರ್ಡ್‌ ಹಾಗೂ ಸುತ್ತಲಿನ 10ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ಇನ್‌ಸ್ಪೆಕ್ಟರ್‌ ಡಿ.ಕೆ. ಪಾಟೀಲ ನೇತೃತ್ವದ ತಂಡ ದಾಳಿ ನಡೆಸಿತು. ಕಾನೂನು ಬಾಹಿರವಾಗಿ ಆಯುಧಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಬಗ್ಗೆಯೂ ಪರಿಶೀಲನೆ ನಡೆಸಿತು.

ರೌಡಿಗಳ ದೈನಂದಿನ ಕಾರ್ಯ, ಅವರ ಓಡಾಟ, ಮನೆಯವರ ಮಾಹಿತಿಯನ್ನು ಪಡೆದರು. ಈ ಹಿಂದೆ ಅವರು ಪಾಲ್ಗೊಂಡಿದ್ದ ಅಪರಾಧ ಚಟುವಟಿಕೆಗಳ ಮಾಹಿತಿಯನ್ನು ಕುಟುಂಬದವರಿಗೆ ತಿಳಿಸಿ, ಜಾಗೃತೆಯಿಂದ ಇರಲು ಎಚ್ಚರಿಕೆ ನೀಡಿದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್‌ ಡಿ.ಕೆ.ಪಾಟೀಲ, ‘ಮುಂಜಾಗ್ರತಾ ಕ್ರಮವಾಗಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ. ಕೆಲವು ರೌಡಿಗಳಿಂದ ಈಗಾಗಲೇ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದು, ಮತ್ತೆ ಅವರಿಂದ ಅಪರಾಧ ಕೃತ್ಯ ಪುನರಾವರ್ತಿತವಾದರೆ ಗಡಿಪಾರು ಮಾಡುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.