ಹುಬ್ಬಳ್ಳಿ: ‘ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ), ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ (ಸಿಎಬಿಐ), ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸಬಲ್ಡ್ ಸಹಯೋಗದಲ್ಲಿ ಇಂಡಸ್ಇಂಡ್ ಬ್ಯಾಂಕ್ ಬೆಂಬಲಿತ ರಾಷ್ಟ್ರೀಯ ಅಂಧ ಮಹಿಳೆಯರ ಟಿ–20 ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ’ ಎಂದು ಸಮರ್ಥನಂ ಸಂಸ್ಥೆಯ ಕ್ರೀಡಾ ಸಂಯೋಜಕ ಧೀರಜ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ.7ರಂದು ಇಂದಿರಾ ಗಾಜಿನಮನೆಯಲ್ಲಿ ಟೂರ್ನಿ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. 8ರಿಂದ ಆರಂಭವಾಗುವ ಲೀಗ್ ಹಂತದಲ್ಲಿ ನಾಲ್ಕು ಗುಂಪುಗಳಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ರೈಲ್ವೆ ಮೈದಾನ, ಬಿಡಿಕೆ ಮೈದಾನ ಮತ್ತು ಎಸ್ಡಿಎಂ ಕ್ರಿಕೆಟ್ ಮೈದಾನದಲ್ಲಿ ಒಟ್ಟು 27 ಪಂದ್ಯಗಳು ನಡೆಯಲಿದ್ದು, 12ರಂದು ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ಅಂತಿಮ ಪಂದ್ಯ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
ಸಿಎಬಿಐ ಸದಸ್ಯ ಉದಯ ಕುಮಾರ ವೈ. ಬಾಗುನವರ ಮಾತನಾಡಿ, ‘ಈ ಹಿಂದೆ ನಡೆದ ಮೂರು ಆವೃತ್ತಿಗಳಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿತ್ತು. ಇದು ನಾಲ್ಕನೇ ಆವೃತ್ತಿಯಾಗಿದೆ’ ಎಂದರು.
‘ಕರ್ನಾಟಕ, ಒಡಿಶಾ, ಮಧ್ಯಪ್ರದೇಶ, ಗುಜರಾತ್, ತೆಲಂಗಾಣ, ಮಹಾರಾಷ್ಟ್ರ, ಜಾರ್ಖಂಡ, ಅಸ್ಸೋಂ, ನವದೆಹಲಿ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ರಾಜಸ್ಥಾನ, ಚಂಡೀಗಢ, ಹರ್ಯಾಣ ತಂಡಗಳು ಪಾಲ್ಗೊಳ್ಳಲಿವೆ’ ಎಂದು ತಿಳಿಸಿದರು.
ಶಿವರಾಮ ದೇಶಪಾಂಡೆ, ಡಾ. ಸಂಜಯ್, ಅನುಲಿ ವರ್ಣೇಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.