ADVERTISEMENT

9ರಂರು ಕಟ್ಟಡ ಕಾರ್ಮಿಕರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 15:39 IST
Last Updated 3 ಜುಲೈ 2024, 15:39 IST

ಹುಬ್ಬಳ್ಳಿ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದ ಅವ್ಯವಹಾರದ ವಿರುದ್ಧ ಮುಂದಿನ ಹೋರಾಟ ರೂಪಿಸಲು ಅಖಿಲ ಭಾರತ ಸಂಯುಕ್ತ ಕಾರ್ಮಿಕ ಸಂಘಟನೆಗಳ ಒಕ್ಕೂಟದ (ಎಐಯುಟಿಯುಸಿ)  ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘವು ಜುಲೈ 9ರಂದು ಧಾರವಾಡದಲ್ಲಿ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಿದೆ.

‘ಸಮ್ಮೇಳನಕ್ಕೆ ಮುನ್ನ ಮೆರವಣಿಗೆ ನಡೆಯಲಿದೆ. ಸರ್ಕಾರಿ ನೌಕರರ ಭವನದಲ್ಲಿ ನಡೆಯುವ ಪ್ರತಿನಿಧಿ ಅಧಿವೇಶನದಲ್ಲಿ 20 ಜಿಲ್ಲೆಗಳ 200 ಪ್ರತಿನಿಧಿಗಳು ಭಾಗವಹಿಸುವರು. ನಂತರ ಬಹಿರಂಗ ಅಧಿವೇಶನ ಜರುಗಲಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ. ಸೋಮಶೇಖರ್‌ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಟ್ಟಡ ಕಾರ್ಮಿಕರ ಬೋಗಸ್‌ ಕಾರ್ಡ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯಲ್ಲಿ ನಿಜವಾದ ಕಾರ್ಮಿಕರ ಕಾರ್ಡ್‌ಗಳನ್ನೂ ರದ್ದುಪಡಿಸಲಾಗಿದೆ. ಇದೇ ನೆಪದಲ್ಲಿ ಸೌಲಭ್ಯಗಳನ್ನು ಕಡಿತ ಮಾಡಲಾಗಿದೆ. ಆನ್‌ಲೈನ್‌ ಮೂಲಕ ಕಾರ್ಡ್‌ ನವೀಕರಣಕ್ಕೆ ಅರ್ಜಿ ಸಲ್ಲಿಸುವುದು ತ್ರಾಸದಾಯಕವಾಗಿದೆ. ಮಂಡಳಿಯ ಭ್ರಷ್ಟಾಚಾರ, ಹಣದ ಪೋಲು ತಡೆಯುವುದರೊಂದಿಗೆ ಈ ಕುರಿತು ತನಿಖೆ ಸಮಗ್ರ ನಡೆಸಬೇಕು ಎಂಬುದು ಸೇರಿ ವಿವಿಧ ವಿಷಯಗಳನ್ನು ಚರ್ಚಿಸಲಾಗುವುದು’ ಎಂದರು.

ADVERTISEMENT

ಸಂಘದ ಕಾರ್ಯದರ್ಶಿ ಎ. ದೇವದಾಸ್‌, ಗಂಗಾಧರ ಬಡಿಗೇರ, ಎಂ.ಬಿ. ತಾಯದಾಸ್, ಯೋಗಪ್ಪ ಜೋತೆಪ್ಪನವರ, ಅಲ್ಲಾಭಕ್ಷ ಕಿತ್ತೂರ, ಹಸ್ಮೀನ್‌ಖಾನ್‌ ರಾಟೀಮನಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.