ADVERTISEMENT

ಕೃಷ್ಣ ಪಾರಿಜಾತಕ್ಕೆ 150 ವರ್ಷಗಳ ಇತಿಹಾಸ: ಪ್ರೊ. ಮಾಲತಿ ಪಟ್ಟಣಶೆಟ್ಟಿ

​ಪ್ರಜಾವಾಣಿ ವಾರ್ತೆ
Published 30 ಮೇ 2024, 15:38 IST
Last Updated 30 ಮೇ 2024, 15:38 IST
ಧಾರವಾಡದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಿದ್ದ ಕೃಷ್ಣ ಪಾರಿಜಾತಕ್ಕೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಚಾಲನೆ ನೀಡಿದರು
ಧಾರವಾಡದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಿದ್ದ ಕೃಷ್ಣ ಪಾರಿಜಾತಕ್ಕೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಚಾಲನೆ ನೀಡಿದರು   

ಧಾರವಾಡ: ‘ಉತ್ತರ ಕರ್ನಾಟಕದ ಕಲಾವಿದರು ಕೃಷ್ಣ ಪಾರಿಜಾತ ಜನಪದ ಕಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದಾರೆ. ಈ ಜನಪದ ಕಲೆಗೆ ಸುಮಾರು 150 ವರ್ಷಗಳ ಇತಿಹಾಸವಿದೆ’ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪವು ಈಚೆಗೆ ಆಯೋಜಿಸಿದ್ದ ಕೃಷ್ಣ ಪಾರಿಜಾತದಲ್ಲಿ ಭಗವದ್ಗೀತೆ ಉಪನ್ಯಾಸ ಹಾಗೂ ಕೃಷ್ಣ ಪಾರಿಜಾತದ ಕೊರವಂಜಿ ಭಾಗ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಗೀತವೇ ಕೃಷ್ಣ ಪಾರಿಜಾತದ ಜೀವಾಳ. ಇದೊಂದು ರಮ್ಯವಾದ ಗೀತರೂಪಕವಾಗಿದ್ದು, ಸ್ಮರಣ ಶಕ್ತಿ ಹಾಗೂ ಮೌಖಿಕ ಪರಂಪರೆಯೇ ಜಾನಪದ ಕಲಾವಿದರ ಆಸ್ತಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಕೃಷ್ಣನು ಪಾರಿಜಾತದ ಪುಷ್ಪವನ್ನು ರುಕ್ಮಿಣಿಗೆ ನೀಡಿದಾಗ ಅದನ್ನು ತಿಳಿದ ಸತ್ಯಭಾಮೆ ಕೋಪಿಸಿಕೊಂಡಾಗ ಕೃಷ್ಣನು ಸತ್ಯಭಾಮೆಯನ್ನು ಸಂತೈಸುವ ಪರಿ, ಅವನಾಡಿದ ನಾಟಕ ಪ್ರಸಂಗ ಕೃಷ್ಣ ಪಾರಿಜಾತದಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ. ಇದು ಕೃಷ್ಣನ ಲೀಲೆಯನ್ನೊಳಗೊಂಡ ಒಂದು ಬಯಲಾಟವಾಗಿದೆ’ ಎಂದರು.

ADVERTISEMENT

ಮಲ್ಲಿಕಾರ್ಜುನ ದಾದನಟ್ಟಿ ಅವರು ಕೃಷ್ಣ ಪಾರಿಜಾತದ ಭಗವದ್ಗೀತೆಯ ಆಯ್ದ ಪ್ರಸಂಗಗಳು ಮತ್ತು ಸಾರವನ್ನು ಉಪನ್ಯಾಸದಲ್ಲಿ ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಧನವಂತ ಹಾಜವಗೋಳ, ವಿಷಯಾ ಜೇವೂರ, ಆಶಾ ಸಯ್ಯದ್, ಸುನಿತಾ ವಾಸರದ, ಮಲ್ಲಿಕಾರ್ಜುನ ಹಿರೇಮಠ, ನಿಂಗಣ್ಣ ಕುಂಟಿ, ಎಂ.ಎಸ್. ನರೇಗಲ್, ಸಂಗಮೇಶ ಮೆಣಸಿನಕಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.