ADVERTISEMENT

ಅಮಿತ್ ಶಾ, ಸಿಎಂ ಭೇಟಿ ವೇಳೆ ಪ್ರತಿಭಟನೆ ಅನಿವಾರ್ಯ: ಲೋಕನಾಥ್ ಹೆಬಸೂರ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 16:17 IST
Last Updated 31 ಜನವರಿ 2024, 16:17 IST
ನವಲಗುಂದ ರೈತರ ಮೇಲಿನ ಪ್ರಕರಣ ವಾಪಾಸ್ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರೈತ ಹೋರಾಟಗಾರರು ತಹಶೀಲ್ದಾರ್ ಶೋಭಾ ಹುಲ್ಲಣ್ಣವರ ಅವರಿಗೆ ಮನವಿ ಸಲ್ಲಿಸಿದರು
ನವಲಗುಂದ ರೈತರ ಮೇಲಿನ ಪ್ರಕರಣ ವಾಪಾಸ್ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರೈತ ಹೋರಾಟಗಾರರು ತಹಶೀಲ್ದಾರ್ ಶೋಭಾ ಹುಲ್ಲಣ್ಣವರ ಅವರಿಗೆ ಮನವಿ ಸಲ್ಲಿಸಿದರು   

ನವಲಗುಂದ: ಕಳಸಾ ಬಂಡೂರಿ ಹೋರಾಟಗಾರರು ಹಾಗೂ ಅಮಾಯಕ ರೈತರ ಮೇಲೆ 2016-17ರಿಂದ 2023ರ ವರೆಗೆ ಪೊಲೀಸರು ಹಾಕಿದ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ಫೆ.10ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿಗೆ ಆಗಮಿಸಿದ ವೇಳೆ ಹಾಗೂ ಫೆ. 26ರಂದು ಮುಖ್ಯಮಂತ್ರಿಗಳು ನವಲಗುಂದಕ್ಕೆ ಬಂದ ವೇಳೆ ರೈತ ಒಕ್ಕೂಟದಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮಹದಾಯಿ, ಕಳಸಾ–ಬಂಡೂರಿ ಹೋರಾಟ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಲೋಕನಾಥ್ ಹೆಬಸೂರ್ ಹೇಳಿದರು.

ಈ ಸಂದರ್ಭದಲ್ಲಿ  ಕಾನೂನು ಸುವ್ಯವಸ್ಥೆ ಹದಗೆಟ್ಟು ಅವಘಡಗಳು ಸಂಭವಿಸಿದಲ್ಲಿ ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಪಟ್ಟಣದ ರೈತ ಭವನದಲ್ಲಿ ಕರ್ನಾಟಕ ರಾಜ್ಯ ಜಾತ್ಯತೀತ-ಪಕ್ಷಾತೀತ ಮಹದಾಯಿ ಕಳಸಾ ಬಂಡೂರಿ ರೈತ, ಅಸಂಘಟಿತ ಕಾರ್ಮಿಕರ, ಮಹಿಳೆಯರ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿಯಿಂದ ರೈತರ ಮೇಲಿನ ಪ್ರಕರಣ ವಾಪಾಸ್ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ತಹಶೀಲ್ದಾರ್ ಇಲಾಖೆಯ ಶೋಭಾ ಹುಲ್ಲಣ್ಣವರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ADVERTISEMENT

ಅಧ್ಯಕ್ಷ ರಘುನಾಥರಡ್ಡಿ ನಡುವಿನಮನಿ ಮಾತನಾಡಿ, ‘ಬಹುದಿನದ ಬೇಡಿಕೆಯಾದ ಕಳಸಾ-ಬಂಡೂರಿ ಯೋಜನೆಗೆ ಸಂಬಂಧ ಪಟ್ಟ ಇಲಾಖೆಗಳ ಅನುಮತಿ ಪಡೆದು ಕೂಡಲೇ ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಸವರಾಜ ತಳವಾರ, ಆರ್.ಆರ್. ನಾಗಮ್ಮನವರ, ಎಂ.ಎ. ನಧಾಪ, ವಿಠಲ ಗೊಣ್ಣಾಗರ, ಸಿದ್ದಪ್ಪ ಕಂಬಳ್ಳಿ, ಶಂಕರಗೌಡ ಭರಮಗೌಡ್ರ, ಬಸಪ್ಪ ಮುಪ್ಪಯನವರ, ವೈ.ಕೆ. ತಡಹಾಳ, ಭೀಮಪ್ಪ ಹಿರಗಣ್ಣವರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.