ಧಾರವಾಡ: ‘ಬಳ್ಳಾರಿ ಜಿಲ್ಲೆಯ ದೇವದಾರಿ ಅರಣ್ಯದಲ್ಲಿ ಗಣಿಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಜೊತೆ ಚರ್ಚಿಸಲು ಸಿದ್ಧ ಇದ್ದೇನೆ. ಅವರು ಯಾವಾಗಲಾದರೂ ನಮ್ಮ ಕಚೇರಿಗೆ ಬರಬಹುದು’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
‘ಹಿರೇಮಠ ಅವರು ಕಚೇರಿಗೆ ಬಂದರೆ ಎಲ್ಲ ದಾಖಲೆಪತ್ರಗಳನ್ನು ತೋರಿಸುವೆ. ಕುದುರೆಮುಖ ಅದಿರು ಕಂಪೆನಿಯು (ಕೆಐಒಸಿಎಲ್) ಹಣಕಾಸು ಸಂಸ್ಥೆಗಳಿಂದ ಸಾಲಕ್ಕಾಗಿ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೆ ಅನುಮೋದನೆ ನೀಡಲಾಗಿದೆ. ಅರಣ್ಯದಲ್ಲಿ ಅದಿರು ಗಣಿಗಾರಿಕೆಗೆ ನಾನು ಸಹಿ ಹಾಕಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಬಳ್ಳಾರಿ ಜಿಲ್ಲೆಯ ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಒಪ್ಪಿಗೆ ಕೊಟ್ಟಿರುವುದು ಈಗ ಅಲ್ಲ. ಈ ಗಣಿಗಾರಿಕೆಗೆ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. 2017ರಲ್ಲಿ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ. ಲೋಕಾಯುಕ್ತ, ಕೋರ್ಟ್ ಎಲ್ಲವೂ ಮುಗಿದುಹೋಗಿರುವ ಅಧ್ಯಾಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.