ADVERTISEMENT

ರೇಣುಕಾಸ್ವಾಮಿ ಕೊಲೆ | ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ: ಸಂಸದ ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 14:30 IST
Last Updated 12 ಜೂನ್ 2024, 14:30 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹುಬ್ಬಳ್ಳಿ: ‘ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಘಟನೆ ರಾಕ್ಷಸಿ ಕೃತ್ಯವಾಗಿದೆ. ಕೊಲೆಗೈದವರಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಪ್ರಕರಣದಲ್ಲಿ ನಟ ದರ್ಶನ ಅವರ ಹೆಸರು ಬಂದಿದೆ. ಇದೂ ತನಿಖೆ ಪೂರ್ಣಗೊಂಡ ನಂತರವಷ್ಟೇ ಈ‌ ಘಟನೆಯಲ್ಲಿ ಅವರ ಪಾತ್ರ ತಿಳಿಯಬೇಕಾಗಿದೆ. ದೊಡ್ಡ ನಟನ ಹೆಸರು ಇದರಲ್ಲಿ ಕೇಳಿ ಬಂದ ತಕ್ಷಣ ಹಲವು ಅನುಮಾನಗಳು ಹುಟ್ಟುತ್ತವೆ. ಸರ್ಕಾರ ಕಠಿಣ ಕ್ರಮಕೈಗೊಂಡು, ತಪ್ಪು ಎಸಗಿದವರಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು’ ಎಂದು ಅವರು ಆಗ್ರಹಿಸಿದರು.

‘ರೇಣುಕಾಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ವರ್ತಿಸಿದ್ದರೆ ಅದಕ್ಕೆ ಸೈಬರ್ ಠಾಣೆಗೆ ದೂರು ಕೊಡಬಹುದಿತ್ತು. ಅವೆಲ್ಲವನ್ನು ಬಿಟ್ಟು ತಾವೇ ಈ ರೀತಿ ಕಾನೂನು ಕೈಗೆತ್ತಿಕೊಳ್ಳುವುದು ಎಷ್ಟು ಸರಿ? ಈ ಕೊಲೆಯಲ್ಲಿ ಆರೋಪಿಗಳು ಎಷ್ಟೇ ದೊಡ್ಡ ವ್ಯಕ್ತಿ ಇದ್ದರೂ ಕಠಿಣ ಶಿಕ್ಷೆ ಆಗಲೇ ಬೇಕು’ ಎಂದು ಶೆಟ್ಟರ್ ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.