ಹುಬ್ಬಳ್ಳಿ: ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ಧಾರವಾಡ ಶಹರ ಠಾಣಾ ವ್ಯಾಪ್ತಿಯ ರೌಡಿ ನವೀನ ಗಾಂಗಾಜಿಯನ್ನು ಚಿಕ್ಕಮಗಳೂರು ಜಿಲ್ಲೆಗೆ ಆರು ತಿಂಗಳು ಗಡಿಪಾರು ಮಾಡಲಾಗಿದೆ.
ರೌಡಿ ನವೀನ, ಯುವಕರ ಗುಂಪು ಕಟ್ಟಿಕೊಂಡು ಬಡಜನರ ಮೇಲೆ ಹಲ್ಲೆ ಮಾಡುವುದು, ಸಾರ್ವಜನಿಕರ ಜೊತೆ ತಂಟೆ–ತಕರಾರು ಮಾಡಿ ಶಾಂತಿಗೆ ಭಂಗ ತರುವುದು, ಜೀವ ಬೆದರಿಕೆ ಹಾಕುವುದು, ಹಣ ವಸೂಲಿ–ಸುಲಿಗೆ–ಕಳವು ಮಾಡುವುದು, ಮಟ್ಕಾ ದಂಧೆಗೆ ಪ್ರೋತ್ಸಾಹ ನೀಡುವುದು ಸೇರಿದಂತೆ ಅನೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ. ಇವನ ವಿರುದ್ಧ ಹುಬ್ಬಳ್ಳಿ ಶಹರ, ಹುಬ್ಬಳ್ಳಿ ಉಪನಗರ, ಬೆಂಡಿಗೇರಿ, ಘಂಟಿಕೇರಿ ಹಾಗೂ ಕೇಶ್ವಾಪುರ ಪೊಲೀಸ್ ಠಾಣೆಗಳಲ್ಲಿ 10 ಪ್ರಕರಣಗಳು ದಾಖಲಾಗಿವೆ. ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಗಡಿಪಾರು ಆದೇಶ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಪಘಾತ, ವ್ಯಕ್ತಿ ಸಾವು: ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ಧಾರವಾಡ ಹೆಬಸೂರ ರಸ್ತೆ ಮಧ್ಯ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಂಡ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಗ್ರಾಮದ ಸೈದುಸಾಬ ನಲವಡಿ(38) ಮೃತಪಟ್ಟಿದ್ದಾರೆ.
ಸೈದುಸಾಬ ಅವರು ಪುತ್ನನ್ನು ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಅವರು ಪಿಟ್ಸ್ಗೆ ಒಳಗಾಗಿದ್ದರು. ಬೈಕ್ ನಿಯಂತ್ರಣ ತಪ್ಪಿ ಕಾಂಪೌಂಡ್ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕಿಮ್ಸ್ಗೆ ದಾಖಲಿಸಲಾಗಿತ್ತು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.