ಹುಬ್ಬಳ್ಳಿ: ರಾಜ್ಯ ಗುಪ್ತವಾರ್ತೆಯ ಉಪ ಪೊಲೀಸ್ ಮಹಾ ನಿರ್ದೇಕರಾದ ಕೆ.ಸಂತೋಷ ಬಾಬು ಅವರಿಗೆ ಹು-ಧಾ ಮಹಾನಗರ ಪೊಲೀಸ್ ಕಮಿಷನರ್ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.
ಈ ಹಿಂದೆ ಕಮಿಷನರ್ ಆಗಿದ್ದ ರಮನ್ ಗುಪ್ತಾ ಅವರನ್ನು ವರ್ಗಾವಣೆ ಮಾಡಿದ ನಂತರ, ತೆರವಾದ ಸ್ಥಾನಕ್ಕೆ ಎಂಟು ದಿನವಾದರೂ ಯಾರನ್ನೂ ನೇಮಿಸಿರಲಿಲ್ಲ. ಬುಧವಾರ ತಡರಾತ್ರಿ ಕೆ.ಸಂತೋಷ ಬಾಬು ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ ನೂತನ ಕಮಿಷನರ್ ಕೆ. ಸಂತೋಷ ಬಾಬು ಅವರು, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿನ ಉತ್ತರ ವಿಭಾಗದ ಎಸಿಪಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಾಂಕೇತಿಕ ಸಭೆ ನಡೆಸಿದರು.
‘ಈ ಹಿಂದೆ ಗದಗದಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಹೀಗಾಗಿ ಈ ಭಾಗದ ಪರಿಚಯವಿದೆ. ಅವಳಿ ನಗರದಲ್ಲಿ ಸೈಬರ್ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’ ಎಂದು ಸಂತೋಷ್ ಬಾಬು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.