ಹುಬ್ಬಳ್ಳಿ: ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ಅಂಗವಾಗಿ ಜ.28ರಂದು ಬೆಳಿಗ್ಗೆ 11.15ಕ್ಕೆ ಇಲ್ಲಿನ ನೆಹರೂ ಮೈದಾನದಲ್ಲಿ ಹಿರಿಯ ನಾಗರಿಕರ ಸಂಘಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ನಿವೃತ್ತ ಸರ್ಕಾರಿ ನೌಕರರು ಮತ್ತು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಹಿರಿಯ ನಾಗರಿಕರು ಸಂಘಟಿತರಾಗಬೇಕಿದೆ. ಅದರ ಜಾಗೃತಿ ಮೂಡಿಸಲು ಜಾಥಾ ಆಯೋಜಿಸಲಾಗಿದೆ. ಐದು ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದರು.
‘ದೇಶದಾದ್ಯಂತ 10 ಕೋಟಿ ಹಿರಿಯ ನಾಗರಿಕರ ನೋಂದಣಿ ಗುರಿ ಹೊಂದಲಾಗಿದ್ದು, ಈಗಾಗಲೇ 2 ಕೋಟಿ ಸದಸ್ಯರಾಗಿದ್ದಾರೆ’ ಎಂದು ಹೇಳಿದರು.
ಹಿರಿಯರಾದ ಚಂದ್ರಕಾಂತ ಬೆಲ್ಲದ, ಜೆ.ಎಂ. ಚಿಕ್ಕಮಠ, ಅರವಿಂದ ಪಾಶ್ಚಾಪುರ, ಬೆಂಗಳೂರು ಸೀನಿಯರ್ ಸಿಟಿಜನ್ ಸಂಘದ ಪ್ರಧಾನ ಕಾರ್ಯದರ್ಶಿ ಪೂರ್ಣಚಂದ್ರ, ಉಪಾಧ್ಯಕ್ಷ ಚಿಕ್ಕ ಹೊನ್ನಯ್ಯ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಬೇಡಿಕೆ: ಹಿರಿಯ ನಾಗರಿಕರನ್ನು ದೇಶದ ಸಂಪತ್ತು ಎಂದು ಘೋಷಿಸುವುದು, ಆರ್ಥಿಕವಾಗಿ ದುರ್ಬಲರಾದ ಹಿರಿಯ ನಾಗರಿಕರಿಗೆ ಮಾಸಿಕ ₹10 ಸಾವಿರ ಪಿಂಚಣಿ ನೀಡುವುದು, ಹಿರಿಯ ನಾಗರಿಕರಿಗೆಂದೇ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದು, ರೈಲಿನಲ್ಲಿ ರಿಯಾಯಿತಿ ಮರು ಆರಂಭಿಸುವುದು, ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಪ್ರತ್ಯೇಕ ಉಚಿತ ಚಿಕಿತ್ಸಾ ವಿಭಾಗ ಆರಂಭಿಸುವುದು, ಪೊಲೀಸ್ ಠಾಣೆಗಳಲ್ಲಿ ಹಿರಿಯ ನಾಗರಿಕರ ಸಮಿತಿ ರಚಿಸುವುದು, ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡುವುದು, ಹಿರಿಯ ನಾಗರಿಕರ ಭವನ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಡ ಹೇರುವುದು ಈ ಸಂಘದ ಉದ್ದೇಶವಾಗಿದೆ.
ಆರ್.ಕೆ. ಮಠದ, ಎಸ್.ಎಂ. ಕೊಳ್ಳೂರ, ಆರ್.ಸಿ. ಹಾಲೇವಾಡಿಮಠ, ಸುನಂದಾ ಬೆನ್ನೂರ, ಜಿ.ಬಿ. ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.