ADVERTISEMENT

ಹುಬ್ಬಳ್ಳಿ: ಮೊಟ್ಟೆ ಬೇಯಿಸಲು ಶಾಲೆಯಲ್ಲಿಲ್ಲ ಪರಿಕರ

ಬಿಸಿಯೂಟದ ಜೊತೆ ಮೊಟ್ಟೆ ವಿತರಿಸಲು ಒಪ್ಪದ ಗುತ್ತಿಗೆ ಸಂಸ್ಥೆಗಳು

ಶಿವರಾಯ ಪೂಜಾರಿ
Published 5 ಅಕ್ಟೋಬರ್ 2024, 6:14 IST
Last Updated 5 ಅಕ್ಟೋಬರ್ 2024, 6:14 IST
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಿರುವುದು (ಸಾಂದರ್ಭಿಕ ಚಿತ್ರ)
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಿರುವುದು (ಸಾಂದರ್ಭಿಕ ಚಿತ್ರ)   

ಹುಬ್ಬಳ್ಳಿ: ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಶಾಲಾ ಶಿಕ್ಷಣ ಇಲಾಖೆಯು ಅಜೀಂ ಪ್ರೇಮ್‌ಜೀ ಫೌಂಡೇಷನ್ ಸಹಯೋಗದಲ್ಲಿ ವಾರದ ಆರು ದಿನ ಬೇಯಿಸಿದ ಮೊಟ್ಟೆ ವಿತರಿಸುತ್ತಿದೆ. ಆದರೆ, ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಯು ಮುಖ್ಯ ಶಿಕ್ಷಕರಿಗೆ ಮತ್ತು ಶಾಲಾ ಆಡಳಿತ ಮಂಡಳಿಗೆ ಸವಾಲಾಗಿದೆ.

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಗುತ್ತಿಗೆ ಇಸ್ಕಾನ್ ಫೌಂಡೇಶನ್ ಮತ್ತು ಅದಮ್ಯ ಚೇತನ್ ಸಂಸ್ಥೆಗೆ ವಹಿಸಲಾಗಿದೆ. ಈ ಸಂಸ್ಥೆಗಳಿಂದ ಜಿಲ್ಲೆಯ 1,069 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿವರೆಗಿನ 1.87 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. 

ಆದರೆ, ಈ ಸಂಸ್ಥೆಗಳು  ಬಿಸಿಯೂಟದೊಂದಿಗೆ ಮೊಟ್ಟೆ ಬೇಯಿಸಿ ನೀಡಲು ನಿರಾಕರಿಸಿವೆ. ಹೀಗಾಗಿ ಶಾಲೆಗಳ ಮೂಲಕವೇ ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ವಿತರಿಸಬೇಕಿದೆ. ಮೊಟ್ಟೆ ಬೇಯಿಸಲು ಶಾಲೆಗಳಲ್ಲಿ ಪರಿಕರಗಳು ಸಹ ಇಲ್ಲದ ಕಾರಣ ಮುಖ್ಯ ಶಿಕ್ಷಕರು ಮತ್ತು ಅಡುಗೆ ಸಹಾಯಕ ಸಿಬ್ಬಂದಿ ಪರದಾಡುವಂತಾಗಿದೆ.

ADVERTISEMENT

‘ಸರ್ಕಾರಿ ಶಾಲೆಗಳಿಗೆ ಬಿಸಿಯೂಟವನ್ನು ಖಾಸಗಿ ಸಂಸ್ಥೆಗಳೇ ಪೂರೈಸುವುದರಿಂದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಅಡುಗೆ ಕೇಂದ್ರ, ಮೊಟ್ಟೆ ಕುದಿಸಲು ಬೇಕಾದ ಪರಿಕರ, ಗ್ಯಾಸ್ ಸಿಲಿಂಡರ್, ಒಲೆ ಇಲ್ಲ. ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಪರಿಕರಗಳನ್ನು ಬಾಡಿಗೆ ತಂದು ಮೊಟ್ಟೆ ಬೇಯಿಸಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಕೆಲವೆಡೆ ಅಡುಗೆ ಸಹಾಯಕರಿಗೆ ಇಂತಿಷ್ಟು ಹಣ ನೀಡಿ ಅವರ ಮನೆಯಲ್ಲೇ ಬೇಯಿಸಿ ತಂದು ನೀಡಲಾಗುತ್ತಿದೆ’ ಎಂದು ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ (ಅಕ್ಷರ ದಾಸೋಹ) ಶಿಕ್ಷಣ ಅಧಿಕಾರಿ ರೂಪಾ ಪುರಂಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊಟ್ಟೆ ಬೇಯಿಸಲು ಶಾಲೆಗಳಲ್ಲಿ ಪರಿಕರಗಳ ಕೊರತೆ ಇರುವ ಬಗ್ಗೆ ಈಚೆಗೆ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಪರಿಕರಗಳನ್ನು ಒದಗಿಸಲು ರಾಜ್ಯ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ’ ಎಂದರು.

‘ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮೊಟ್ಟೆ ನೀಡಲು ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ. ಗ್ರಾಮಸ್ಥರ ಸಹಕಾರದಿಂದ ಹಣ ಹಾಕಿ ಗ್ಯಾಸ್ ಸಿಲಿಂಡರ್, ಒಲೆ ಹಾಗೂ ಪಾತ್ರೆ ಖರೀದಿಸಿ ಶಾಲೆಯಲ್ಲಿ ಮೊಟ್ಟೆ ಬೇಯಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಕೆಲ ವಿದ್ಯಾರ್ಥಿಗಳು ಮೊಟ್ಟೆ ತಿನ್ನುವುದಿಲ್ಲ. ಅವರಿಗೆ ಬಾಳೆಹಣ್ಣು, ಲಾಡು, ಶೇಂಗಾ ಚಿಕ್ಕಿ ನೀಡಲಾಗುತ್ತಿದೆ’ ಎಂದು ನವಲಗುಂದ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಹೇಳಿದರು.

‘ಹೆಚ್ಚುವರಿ ಹಣ ಹೊಂದಾಣಿಕೆ ಕಷ್ಟ’

‘ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಬೇಯಿಸಿದ ಮೊಟ್ಟೆ ನೀಡಲು ತಲಾವೊಂದಕ್ಕೆ ₹6 ನಿಗದಿ ಮಾಡಿದೆ. ಒಂದು ಮೊಟ್ಟೆ ಖರೀದಿಗೆ ₹5.20 ಮೊಟ್ಟೆ ಸುಲಿದು ಕೊಡುವ ಅಡುಗೆ ಸಹಾಯಕರಿಗೆ ₹30 ಪೈಸೆ ಬೇಯಿಸಲು ಗ್ಯಾಸ್ ವೆಚ್ಚ ₹30 ಪೈಸೆ ಮತ್ತು ಸಾಗಣೆಗೆ ₹20 ಪೈಸೆ ನಿಗದಿಪಡಿಸಿದೆ. ಆದರೆ ಮೊಟ್ಟೆ ಬೆಲೆಯೇ ₹6 ಇದೆ. ಹೀಗಿದ್ದಾಗ ಮೊಟ್ಟೆ ಬೇಯಿಸಲು ಸುಲಿಯಲು ಸಾಗಣೆಗೆ ತಗುಲುವ ಹಣವನ್ನು ಹೊಂದಿಸುವುದೇ ಕಷ್ಟವಾಗಿದೆ. ಕೆಲ ಸಂದರ್ಭಗಳಲ್ಲಿ ಮೊಟ್ಟೆ ದರ ಹೆಚ್ಚಳ ಆಗುತ್ತದೆ. ಆಗ ಕಷ್ಟವಾಗುತ್ತದೆ’ ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿಯೊಬ್ಬರು ಹೇಳಿದರು.

1069 ಧಾರವಾಡ ಜಿಲ್ಲೆಯಲ್ಲಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು

1.87 ಲಕ್ಷ ಪ್ರತಿ ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ಪೂರೈಕೆ

₹1122000 ಪ್ರತಿ ದಿನ ಮೊಟ್ಟೆ ಪೂರೈಕೆಗೆ ಬೇಕಾಗುವ ಹಣ

ಬೇಯಿಸಿದ ಮೊಟ್ಟೆಗಳನ್ನೇ ನೀಡಲು ಮೊಟ್ಟೆ ಪೂರೈಸುವವರಿಗೆ ತಿಳಿಸಲಾಗಿದೆ. ಶಾಲೆಗಳಲ್ಲಿ ಮೊಟ್ಟೆ ಬೇಯಿಸಲು ಪರಿಕರಗಳು ಇಲ್ಲದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
ಎಸ್‌.ಎಸ್‌. ಕೆಳದಿಮಠ, ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ ಧಾರವಾಡ ಜಿಲ್ಲೆ
ಧಾರ್ಮಿಕ ಕೇಂದ್ರವಾಗಿದ್ದರಿಂದ ಮೊಟ್ಟೆ ಬೇಯಿಸಿ ನೀಡಲು ಇಸ್ಕಾನ್ ಹಿಂದೇಟು ಹಾಕಿದರೆ ಬಿಸಿಯೂಟ ಮಾತ್ರ ಪೂರೈಸುವುದಾಗಿ ಅದಮ್ಯ ಫೌಂಡೇಶನ್ ತಿಳಿಸಿದೆ.
ರೂಪಾ ಪುರಂಕರ, ಶಿಕ್ಷಣ ಅಧಿಕಾರಿ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ (ಅಕ್ಷರ ದಾಸೋಹ)
ಶಾಲೆಗಳಿಗೆ ಪರಿಕರ ಒದಗಿಸಲು ಲಕ್ಷಾಂತರ ಹಣ ಬೇಕು. ಕೊಟ್ಟರೂ ಅವು ಮೊಟ್ಟೆ ಬೇಯಿಸಲು ಮಾತ್ರ ಬಳಕೆ ಆಗುತ್ತವೆ. ಅದರ ಬದಲು ಮೊಟ್ಟೆ ವಿತರಣೆಗೆ ಖಾಸಗಿ ಸಂಸ್ಥೆಗಳಿಗೆ ಟೆಂಡರ್ ನೀಡಬೇಕು.
ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.