ಕಲಘಟಗಿ: ‘ನರೇದ್ರ ಮೋದಿ ಅವರು ದೇಶದ ಪ್ರಧಾನಿಯಾದ ನಂತರ ಭಾರತ ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪಟ್ಟಣದಲ್ಲಿ ತೆರೆಯಲಾಗಿರುವ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
‘ಕಳೆದ 10 ವರ್ಷಗಳ ಅವಧಿಯಲ್ಲಿ ದೇಸಿ ವಸ್ತುಗಳ ಉತ್ಪಾದನೆ ಹೆಚ್ಚಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಭಯೋತ್ಪಾದನೆ ಮಟ್ಟ ಹಾಕಲಾಗಿದೆ’ ಎಂದರು.
ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಮಾತನಾಡಿ, ಬಿಜೆಪಿ ಕಚೇರಿ ಚುನಾವಣೆಗೆ ಅಲ್ಲ. ಜನರ ಸಮಸ್ಯೆ ಆಲಿಸಲು ತೆರೆದಿರುತ್ತದೆ ಎಂದು ಹೇಳಿದರು.
‘ಗ್ಯಾರಂಟಿ ಯೋಜನೆ ಕಾರ್ಯಕ್ರಮಕ್ಕೆ ನೂರಾರು ಬಸ್ ಬಿಡುವ ಸಚಿವ ಸಂತೋಷ ಲಾಡ್ ಅವರು, ಕ್ಷೇತ್ರದ ವಿದ್ಯಾರ್ಥಿಗಳು, ರೈತರ ಅನುಕೂಲಕ್ಕಾಗಿ ಬಸ್ ಬಿಡುತ್ತಿಲ್ಲ. ಮೋದಿ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಅವರು, ಬಿಜೆಪಿಯ ಸಾಮಾನ್ಯ ಕಾರ್ಯಕರ್ತರ ಜತೆ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.
ಮೂರು ಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಸೇವೆಯೇ ರಾಜಕಾರಣ ಧ್ಯೇಯವಾಗಬೇಕು. ಜಾತಿಯ ಅಧಾರದ ಮೇಲೆ ಎಂದಿಗೂ ರಾಜಕಾರಣ ಮಾಡಬಾರದು ಎಂದರು.
ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಶೇರೆವಾಡ, ಅಳ್ನಾವರ ತಾಲ್ಲೂಕು ಘಟಕದ ಅಧ್ಯಕ್ಷ ಕಲ್ಮೇಶ ಬೇಲೂರು, ಮುಖಂಡರಾದ ಶಶಿ ನಿಂಬಣ್ಣವರ, ಈರಣ್ಣ ಜಡಿ, ಸಿ.ಎಫ್. ಪಾಟೀಲ, ಶಶಿಧರ ಹುಲಿಕಟ್ಟಿ, ವಿಜಯಲಕ್ಷ್ಮಿ ಆಡಿನವರ, ಕಿರಣ ಪಾಟೀಲ ಕುಲಕರ್ಣಿ, ಅಣ್ಣಪ್ಪ ಓಲೇಕಾರ, ಕಲ್ಲಪ್ಪ ಪುಟ್ಟಪ್ಪನವರ, ಫಕ್ಕೀರೇಶ ನೇಸರೇಕರ, ಶಿವಲಿಂಗ ಯಲಿವಾಳ, ಮದನ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.