ಹುಬ್ಬಳ್ಳಿ: ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯುನಿಯನ್ ಹುಬ್ಬಳ್ಳಿ ಘಟಕವು ಇಲ್ಲಿನ ರೈಲ್ ಸೌಧದ ಎದುರು ಸೋಮವಾರದಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿತು.
ಯೂನಿಯನ್ ಪ್ರಧಾನ ಕಾರ್ಯದರ್ಶಿ ಡಿ.ಎಂ.ಡಿಕ್ರೂಜ್ ಮಾತನಾಡಿ, ಹಳೇ ಪಿಂಚಣಿ ಯೋಜನೆ ಜಾರಿ ಮಾಡಬೇಕು ಎಂಬುದು ಕೇಂದ್ರ ಸರ್ಕಾರಿ ನೌಕರರಂತೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆ ಇದೆ. 2004 ಜನವರಿ 1ರ ಬಳಿಕ ನೇಮಕವಾದ ಎಲ್ಲ ವಲಯಗಳ ನೌಕರರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಐತಿಹಾಸಿಕ ಪ್ರದರ್ಶನ ನಡೆಸಿದರೂ ಸರ್ಕಾರವು ಈ ಬಗ್ಗೆ ಗಮನ ಹರಿಸಿಲ್ಲ ಎಂದರು.
ಇದೀಗ ಕೇಂದ್ರದ ಎಲ್ಲ ಕಚೇರಿಗಳ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದ್ದು, ಜನವರಿ 11ರವರೆಗೂ ಮುಂದುವರಿಸಲಾಗುವುದು. ಸರ್ಕಾರಕ್ಕೆ ಇದು ಕೊನೆಯ ಎಚ್ಚರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಸಾಮೂಹಿಕ ಮುಷ್ಕರ ನಡೆಸುವ ನೇರ ಸೂಚನೆ ನೀಡಲಾಗುವುದು. ಇದೆಲ್ಲ ಬೆಳವಣಿಗೆಗೂ ಸರ್ಕಾರವೇ ಹೊಣೆಯಾಗಿದೆ ಎಂದು ಹೇಳಿದರು.
ಸತ್ಯಾಗ್ರಹದಲ್ಲಿ ಪದಾಧಿಕಾರಿಗಳಾದ ಅಶೋಕ ಕುಮಾರ್, ವಿ.ಇ.ಚಾರಖಾನಿ, ಕೆ.ವೆಂಕಟೇಶ, ಜಯಲಕ್ಷ್ಮೀ, ಜೆ.ರಾಕೋಪ್ ಅಂತೋನಿ, ಮುರುಗನ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.