ಹುಬ್ಬಳ್ಳಿ: ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ವತಿಯಿಂದ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮಹೇಂದ್ರ ಸಿಂಘಿ ನೇತೃತ್ವದಲ್ಲಿ ಭಾನುವಾರ ಮನವಿ ಸಲ್ಲಿಸಲಾಯಿತು.
ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಾಣದಿಂದ ಉತ್ತರ ಕರ್ನಾಟಕದ ಸರಕು ಸಾಗಣೆ ವಹಿವಾಟಿಗೆ ಉತ್ತೇಜನ ದೊರೆಯಲಿದೆ. ಹೀಗಾಗಿ ಕಲಘಟಗಿಯವರೆಗೆ ಆಗಿರುವ ಮಾರ್ಗವನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಗದಗ–ಲಕ್ಷ್ಮೇಶ್ವರ–ಯಲವಿಗಿ–ಹಾವೇರಿ ಹೊಸ ರೈಲು ಮಾರ್ಗ ಆರಂಭಿಸಬೇಕು, ಹುಬ್ಬಳ್ಳಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯವನ್ನು ಬೆಳಿಗ್ಗೆ 5:30ಕ್ಕೆ ಬದಲಾಯಿಸಬೇಕು. ವಂದೇ ಭಾರತ್ ರೈಲುಗಳ ವೇಗವನ್ನು ಹೆಚ್ಚಿಸಬೇಕು. ಹುಬ್ಬಳ್ಳಿ–ಮುಂಬಯಿ ಹಾಗೂ ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ಆರಂಭಿಸಬೇಕು. ಹುಬ್ಬಳ್ಳಿ–ಶಿರಡಿ ನಿತ್ಯ ನೇರ ರೈಲು ಆರಂಭಿಸಬೇಕು. ಹುಬ್ಬಳ್ಳಿ–ಜೈಪುರ–ನವದೆಹಲಿ ಸುಪರ್ಫಾಸ್ಟ್ ರಾಜಧಾನಿ ಎಕ್ಸ್ಪ್ರೆಸ್ ನೇರ ರೈಲನ್ನು ಆರಂಭಿಸಬೇಕು. ಮುಂಬಯಿ, ಗುಜರಾತ್ ಹಾಗೂ ರಾಜಸ್ಥಾನಗಳಿಗೆ ಹೊಸ ರೈಲುಗಳನ್ನು ಆರಂಭಿಸಬೇಕು. ಹುಬ್ಬಳ್ಳಿ–ದಾದರ್, ಹಾಗೂ ಹುಬ್ಬಳ್ಳಿ–ಹೈದರಾಬಾದ್ ರೈಲನ್ನು ನಿತ್ಯ ಓಡಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಈ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.