ಹುಬ್ಬಳ್ಳಿ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರದ ಶಾರದಾ ಲಕ್ಷ್ಮೀನರಸಿಂಹ ಪೀಠದ ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ವರ್ಧಂತಿ ಮಹೋತ್ಸವವನ್ನು ಜುಲೈ 1ರಿಂದ 3ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಭಗವತ್ಪಾದಂ ಆಧ್ಯಾತ್ಮಿಕ ಸಂಸ್ಥೆಯ ಪ್ರಧಾನ ಸಂಚಾಲಕ ರಮೇಶ ಗುರೂಜಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಗವತ್ಪಾದಂ ಆಧ್ಯಾತ್ಮಿಕ ಸಂಸ್ಥೆ ಮತ್ತು ಹುಬ್ಬಳ್ಳಿ ಭಕ್ತರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಗೋಕುಲ ರಸ್ತೆಯ ಗೋಕುಲ ಗಾರ್ಡನ್ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
‘ಜುಲೈ 1ರಂದು ಸಂಜೆ 4ಕ್ಕೆ ಶ್ರೀಗಳ ಪುರಪ್ರವೇಶ, ಸಂಜೆ 4.15ಕ್ಕೆ ನಗರದ ಗಬ್ಬೂರು ಕ್ರಾಸ್ನಿಂದ ಗೋಕುಲ ರಸ್ತೆಯ ಹವ್ಯಕ ಭವನದವರೆಗೆ ಬೈಕ್ ರ್ಯಾಲಿ ಮೂಲಕ ಶ್ರೀಗಳನ್ನು ಸ್ವಾಗತಿಸಲಾಗುವುದು. ಸಂಜೆ 5.30ಕ್ಕೆ ಹವ್ಯಕ ಭವನದಲ್ಲಿ ಶ್ರೀಗಳಿಂದ ಶ್ರೀಚಕ್ರ ನವಾವರಣ ಪೂಜೆ ನಡೆಯಲಿದೆ’ ಎಂದು ಹೇಳಿದರು.
‘ಜುಲೈ 2ರಂದು 4.15ಕ್ಕೆ ಹವ್ಯಕ ಭವನದಿಂದ ಗೋಕುಲ ಗಾರ್ಡನ್ ವರೆಗೆ ಶೋಭಾಯಾತ್ರೆ, ನಡೆಯಲಿದೆ. ಜು.3ರಂದು ಬೆಳಿಗ್ಗೆ 7.30ಕ್ಕೆ ಹವ್ಯಕ ಭವನದಲ್ಲಿ ಶ್ರೀಗಳ ವಿಶೇಷ ಆಹ್ನಿಕ ದರ್ಶನ, 9.30ಕ್ಕೆ ನರಸಿಂಹ ಸಹಸ್ರನಾಮದ ಸಮರ್ಪಣೆ, 10.30ಕ್ಕೆ ಚಂಡಿಕಾ ಹೋಮ, ಆಯುಷ್ಯ ಹೋಮ, ಪವಮಾನ ಸೂಕ್ತ ಹೋಮ ಮತ್ತು ಗುರು ಗಾಯತ್ರಿ ಹೋಮದ ಪೂರ್ಣಾಹುತಿ ಜರುಗಲಿದೆ’ ಎಂದರು.
‘ಬೆಳಿಗ್ಗೆ 11ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ತೇಜಸ್ವಿ ಸೂರ್ಯ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಬಿಜೆಪಿ ಮುಖಂಡ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಎನ್.ಎಚ್. ಕೋನರಡ್ಡಿ, ಉದ್ಯಮಿಗಳಾದ ವಿ.ಎಸ್.ವಿ. ಪ್ರಸಾದ, ಆನಂದ ಸಂಕೇಶ್ವರ ಪಾಲ್ಗೊಳ್ಳುವರು’ ಎಂದು ತಿಳಿಸಿದರು.
ವರ್ಧಂತಿ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ವಿ.ಎಸ್.ವಿ. ಪ್ರಸಾದ, ಸುರೇಶ ಶೇಜವಾಡಕರ, ವೀಣಾ ಹೆಗಡೆ, ಕೌಸ್ತುಭ ಕುಲಕರ್ಣಿ, ಅಪ್ಪಯ್ಯ ನಲತ್ವಾಡಮಠ, ಕಾವ್ಯಾ ಹೆಗಡೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.