ನರಗುಂದ: ನರಗುಂದ ಮಾರ್ಗವಾಗಿ ಘಟಪ್ರಭಾದಿಂದ ಕುಷ್ಟಗಿವರೆಗಿನ ರೈಲ್ವೆ ಮಾರ್ಗವು ಈ ಭಾಗಕ್ಕೆ ಅತ್ಯಗತ್ಯವಿದೆ. ಆದ್ದರಿಂದ ಕೂಡಲೇ ಈ ಭಾಗದ ಸಂಸದರ ಜೊತೆಗೂಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಪಟ್ಟಣದ ರೈಲ್ವೆ ಹೋರಾಟ ಸಮಿತಿ ಸದಸ್ಯರು ಸೋಮವಾರ ಹುಬ್ಬಳ್ಳಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ಗೆ ಮನವಿ ಸಲ್ಲಿಸಿದರು.
ನರಗುಂದ ರೈಲ್ವೆ ಹೋರಾಟ ಸಮಿತಿ ಮುಖಂಡ ಚನ್ನು ನಂದಿ ಮಾತನಾಡಿ, ಈ ರೈಲ್ವೆ ಮಾರ್ಗ ಆರಂಭಿಸಿದರೆ ಏಳು ತಾಲ್ಲೂಕು ಕೇಂದ್ರಗಳಾದ ಘಟಪ್ರಭಾ, ಗೋಕಾಕ, ಯರಗಟ್ಟಿ, ಸವದತ್ತಿ, ನರಗುಂದ, ರೋಣ, ಗಜೇಂದ್ರಗಡ, ಕುಷ್ಟಗಿ ಹಾಗೂ ಮುನವಳ್ಳಿ, ಎಲ್ಲಮ್ಮನಗುಡ್ಡ ಪ್ರಮುಖ ಸ್ಥಳಗಳಿಗೆ ಅನುಕೂಲ ಆಗಲಿದೆ. ಅಂದಾಜು 11 ಲಕ್ಷ ಜನಸಂಖ್ಯೆಗೆ ಅನುಕೂಲ ಆಗಲಿದೆ. ಇಲ್ಲಿಯ ವಾಣಿಜ್ಯ ಬೆಳೆಗಳು, ಹತ್ತಿ, ಗೋವಿನ ಜೋಳ, ಸೂರ್ಯಕಾಂತಿ, ಕಡಲೆ, ಗೋದಿ, ಬಿಳಿಜೋಳ, ಶೆಂಗಾ, ತೊಗರಿ ಇವು ಪ್ರಮುಖ ಬೆಳೆಗಳ ಆಮದು, ರಫ್ತಿಗೆ ಅವಕಾಶ ಸಿಗುತ್ತದೆ ಎಂದು ವಿವರಿಸಿದರು.
ಪ್ರೇಕ್ಷಣೀಯ ಸ್ಥಳಗಳಾದ ಯಲ್ಲಮ್ಮನಗುಡ್ಡ, ಗೊಡಚಿ ವೀರಭದ್ರೇಶ್ವರ, ಬಾದಾಮಿ, ಬನಶಂಕರಿ, ಇಟಗಿ ಭೀಮಾಂಬಿಕೆ ಈ ಕ್ಷೇತ್ರಗಳಿಗೆ ದರ್ಶನ ಕೊಡುವ ಭಕ್ತರ ಸಂಖ್ಯೆ ವರ್ಷಕ್ಕೆ ಒಂದು ಕೋಟಿಗೂ ಹೆಚ್ಚು ಇದೆ. ಆದ್ದರಿಂದ ರೈಲ್ವೆ ಮಾರ್ಗ ಬೇಕು. ಈ ಮಾರ್ಗವು ಲಾಭದಾಯಕವೂ ಹಾಗೂ ಪ್ರಯಾಣಿಕರಿಗೆ ವ್ಯಾಪಾರಸ್ಥರಿಗೆ ತುಂಬಾ ಅನುಕೂಲವಾಗಲಿದೆ. ನಮ್ಮ ರೈಲ್ವೆ ಹೋರಾಟಕ್ಕೆ ಬೆಂಬಲಿಸಬೇಕೆಂದು ನಂದಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚನಬಸಪ್ಪ ಕಂಠಿ,ಅಪ್ಪಣ್ಣ ನಾಯ್ಕರ, ಜೆ.ಆರ್.ಕದಂ, ಮಾರುತಿ ಭೋಸಲೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.