ಡಂಬಳ: ರಾಜ್ಯದಲ್ಲಿ ಬಿಜೆಪಿಗೆ ಸುಳ್ಳೇ ಬಂಡವಾಳವಾಗಿದೆ. ಅವರ ಸುಳ್ಳುಗಳ ಮಾತುಗಳಿಗೆ ಬೆಲೆ ಇಲ್ಲವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅನುದಾನಕ್ಕೆ ಸರ್ಕಾರದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಶಾಸಕ ಜಿ.ಎಸ.ಪಾಟೀಲ ಹೇಳಿದರು.
ಡಂಬಳ ಹೋಬಳಿಯ ಬರದೂರ ಗ್ರಾಮದಿಂದ ತಾಮ್ರಗುಂಡಿ ಗ್ರಾಮಕ್ಕೆ ₹ 2 ಕೋಟಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮತ್ತು ₹ 13 ಲಕ್ಷ ವೆಚ್ಚದ ವಿವೇಕ ಶಾಲಾ ಕೊಠಡಿ ಯೋಜನೆಯಡಿ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಬರದ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದರು ಕೂಡ ಅನುದಾನ ನೀಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎನ್.ಡಿ.ಆರ್.ಎಫ್. ಅನುದಾನ ಬಿಡುಗಡೆಯಾಗಿಲ್ಲ, ಖುದ್ದು ಮುಖ್ಯಮಂತ್ರಿ ಅವರು ರೈತರ, ಕೂಲಿಕಾರ್ಮಿಕರ ಹಿತಕ್ಕಾಗಿ ದೆಹಲಿಗೆ ತೆರಳಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೋದಿ ಅವರನ್ನು ಭೇಟಿ ಮಾಡಿ ಬರ ಪರಿಹಾರ ನಿಧಿ ಬಿಡುಗಡೆಗೆ ಮನವಿ ಮಾಡಿದ್ದರೂ ಕೂಡಾ ಈ ಕ್ಷಣದವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಮಿಥುನ.ಜಿ.ಪಾಟೀಲ್, ಗವಿಸಿದ್ದಯ್ಯ ಹಿರೇಮಠ, ಮುಖಂಡ ಯಲ್ಲಪ್ಪ ಹುಲಗೇರಿ, ಅಮರೇಶ ಹಿರೇಮಠ, ದೇವಪ್ಪ ಚಿಕ್ಕಣ್ಣವರ, ರವಿ ವಡ್ಡರ, ನಿಂಗಪ್ಪ ಕವಲೂರ, ಮೇಲಾರಪ್ಪ ಕವಲೂರ, ಬಸಪ್ಪ ರೇವಣ್ಣವರ, ಹಾಲಪ್ಪ ಮಾದರ, ಸೋಮಪ್ಪ ಹೈತಾಪುರ, ಬಸಪ್ಪ ಬಂಡಿ, ಪರಮೇಶಪ್ಪ ರೇವಣ್ಣವರ, ಮಹಾದೇವಪ್ಪ ರೇವಣ್ಣವರ, ಹನಮಪ್ಪ ಶಿರಹಟ್ಟಿ, ಮಂಜುನಾಥ ಬೂದಿಹಾಳ, ಪಿಡಬ್ಲುಡಿ ಎಇಇ ಎಂ.ಎಸ್.ಪಾಟೀಲ, ಸಹಾಯಕ ಎಂಜಿನಿಯರ್ ನಾಗೇಂದ್ರ ಪಟ್ಟಣ್ಣಶೆಟ್ಟಿ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.