ನರಗುಂದ: ಯೋಗ ನಿಷ್ಠೆಯಿಂದ ಸಮಾಜದಲ್ಲಿ ಸ್ವಾಸ್ಥ್ಯ ನಿರ್ಮಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾಪುರುಷರಲ್ಲಿ ತಾಲ್ಲೂಕಿನ ಭೈರನಹಟ್ಟಿಯ ಲಿಂ.ಬ್ರಹ್ಮಾನಂದ ಪರಮಹಂಸರು ಒಬ್ಬರು. ಅವರ ರಥೋತ್ಸವ ಸೋಮವಾರ ನಡೆಯಲಿದೆ.
ಬ್ರಹ್ಮಾನಂದರು ಮೂಲತಃ ಗುಜರಾತ ಪ್ರಾಂತದ ಶಿವಬಡೋಚಾ ಗ್ರಾಮದ ಗುರುರಾಮ ಪ್ರಸಾದ್ ಹಾಗೂ ದೇವಜಾನಕಿ ದಂಪತಿಯ ಪುತ್ರ. ಬ್ರಹ್ಮಾನಂದ ಪರಮಹಂಸರು ಬಾಲ್ಯದಲ್ಲಿಯೇ ಅನೇಕ ಲೀಲೆ, ಪವಾಡ ತೋರಿ ಸ್ವಗ್ರಾಮದಲ್ಲಿಯೇ ಗುರುತು ಮೂಡಿಸಿದ್ದರು.
ಬಾಲ್ಯದಿಂದಲೆ ಅಧ್ಯಾತ್ಮದತ್ತ ಒಲವು ಹೊಂದಿದ್ದ ಅವರು, ಲೌಕಿಕ ಬದುಕಿನ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಬಯಸಿ ಸಂಸಾರ ತ್ಯಜಿಸಿ, ದೇಶ ಸಂಚಾರ ಕೈಗೊಂಡು ಢಾಕೋರ ಪಟ್ಟಣಕ್ಕೆ ಬಂದರು. ಅಲ್ಲಿ ಶ್ರೀಕೃಷ್ಣ ದರ್ಶನ ಪಡೆದು ಗುಮಟಿಯ ಗಂಗಾನದಿಯಲ್ಲಿ ಸ್ನಾನಗೈದು ಬಂದಾಗ ಶ್ರೀಗಳು ಅಲ್ಲಿರುವ ಜನರಿಗೆ ದೈವಿ ಸ್ವರೂಪಿಗಳಾಗಿ ಕಂಡರು.
ಉತ್ತರದ ಕಾಶಿ, ದ್ವಾರಕೆಗಳ ದೇವಸನ್ನಿಧಿಯಲ್ಲಿ ಸೇವೆಗೈದು ಹಿಮಾಲಯದಲ್ಲಿ ತಪೋಗೈದರೆಂದು ಪ್ರತೀತಿ ಇದೆ. ತಪಸ್ವಿಗಳಾದ ಯುವ ಬ್ರಹ್ಮಾನಂದರು ದಕ್ಷಿಣ ಭಾರತದ ಪವಿತ್ರ ಸ್ಥಳಗಳನ್ನೆಲ್ಲ ಸಂದರ್ಶಿಸಿ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸೇವೆ ಮಾಡಿ ಯೋಗ
ಸಾಧನೆಗೈದರೆಂದು ಕೆಲ ಕೃತಿಗಳಲ್ಲಿ ಉಲ್ಲೇಖವಿದೆ.
ನಂತರ ಬನಶಂಕರಿಗೆ ಬಂದು ಶಾಖಾಂಬರಿ ದೇವಿಯನ್ನು ಸಾಕ್ಷಾತ್ಕರಿಸಿಕೊಂಡು ದೇವಿಯ ಕೈಯಿಂದ ಮೃಷ್ಟಾನ್ನ ಭೋಜನ ಮಾಡಿ ಅಲ್ಲಿರುವ ಪೂಜಾರಿಗಳಿಗೆ ಅಚ್ಚರಿ ಪಡಿಸಿದರು.
ಹಾಗೆ ಸಂಚರಿಸುತ್ತ ನರಗುಂದ ತಾಲ್ಲೂಕು ಭೈರನಹಟ್ಟಿ ಗ್ರಾಮಕ್ಕೆ ಬಂದು, ಅಲ್ಲಿ
ಭಕ್ತರಿಗೆ ಧರ್ಮಭೋಧನೆ ಮಾಡಿದರು. ಅಲ್ಲಿಂದ ಮುಂದೆ ರಡ್ಡೇರ ನಾಗನೂರ
ನಂತರ ಬದಾಮಿ ತಾಲ್ಲೂಕು ಗೋವನಕೊಪ್ಪದಲ್ಲಿಯೂ ಭಕ್ತರನ್ನು ಒಲಿಸುತ್ತ ತಮ್ಮ ಸೇವೆ ಮುಂದುವರಿಸಿದರು.
ಇಂಥಹ ಬ್ರಹ್ಮಾನಂದರ 109ನೇ ಜಾತ್ರಾ ಮಹೋತ್ಸವ ಜೂನ್ 17ರಂದು ಬೈರನಹಟ್ಟಿಯಲ್ಲಿ ಶಾಂತಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ.
ರಥೋತ್ಸವದಲ್ಲಿ ಕನ್ನಡದ ಬಾವುಟದ ಜೊತೆಗೆ ಭಾವೈಕ್ಯವನ್ನು ಸಾರುವ ಧ್ವಜವನ್ನು ಕಟ್ಟಿ ನಾಡಿಗೆ ಭಾವೈಕ್ಯದ ಸಂದೇಶ ಸಾರುವುದು ವಿಶೇಷ.
ಬ್ರಹ್ಮಾನಂದರು ಸಂಚಾರ ಮಾಡುತ್ತಾ ಬಂದು ಭೈರನಹಟ್ಟಿಯಲ್ಲಿ ಹಲವು ವರ್ಷ ನೆಲೆಸಿದ್ದರು. ಅವರು ಭವರೋಗದ ವೈದ್ಯರಾಗಿದ್ದರು. ಅವರ ಜಾತ್ರೆಯಲ್ಲಿ ಕನ್ನಡ ಬಾವುಟ ಭಾವೈಕ್ಯದ ಧ್ವಜ ಕಟ್ಟಿ ರಥೋತ್ಸವ ಜರುಗಲಿದೆಶಾಂತಲಿಂಗ ಶ್ರೀ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.