ಲಕ್ಷ್ಮೇಶ್ವರ: ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಭಾನುವಾರ ಇಲ್ಲಿನ ತಾಯಿ ಪಾರ್ವತಿ ಮಕ್ಕಳ ಬಳಗದಲ್ಲಿ ಜಿಲ್ಲಾಮಟ್ಟದ ಚೆಸ್ ಟೂರ್ನಿಗೆ ಚಾಲನೆ ನೀಡಲಾಯಿತು.
ಅಸೋಸಿಯೇಷನ್ನ ಜಿಲ್ಲಾ ಘಟಕದ ಗೌರವಾಧ್ಯಕ್ಷ ಆರ್.ವಿ.ವೆರ್ಣೇಕರ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ‘ಚೆಸ್ ಚತುರರ ಆಟವಾಗಿದೆ. ಇದರಲ್ಲಿ ಭಾಗವಹಿಸುವುದರಿಂದ ಮಕ್ಕಳ ಬುದ್ಧಿಶಕ್ತಿ ಬೆಳೆಯುತ್ತದೆ. ನಮ್ಮ ಅಸೋಸಿಯೇಷನ್ ವತಿಯಿಂದ ಪ್ರತಿವರ್ಷ ಪಂದ್ಯಾವಳಿ ಅಯೋಜಿಸುತ್ತ ಬಂದಿದ್ದೇವೆ. ಈ ಬಾರಿ ಜಿಲ್ಲಾಮಟ್ಟದ ಪಂದ್ಯಾವಳಿ ನಡೆಸುತ್ತಿದ್ದು, ಈ ಸ್ಪರ್ಧೆಯಲ್ಲಿ ವಿಜೇತ ಚೆಸ್ ಕ್ರೀಡಾಪಟುಗಳು ರಾಜ್ಯ ಪಂದ್ಯಾವಳಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುತ್ತಾರೆ’ ಎಂದರು.
ಅಸೋಸಿಯೇಷನ್ನ ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ ಅಗಡಿ ಮಾತನಾಡಿ, ‘ಈ ಬಾರಿ ರಾಜ್ಯ ತಂಡಕ್ಕೆ ಜಿಲ್ಲಾ ಆಟಗಾರರನ್ನು ಕಳುಹಿಸಿಕೊಡುವ ಜವಾಬ್ದಾರಿ ನಮ್ಮ ಪಾಲಿಗೆ ಬಂದಿದೆ. ಜಿಲ್ಲೆಯ ಐದೂ ತಾಲ್ಲೂಕುಗಳಿಂದ ಚೆಸ್ ಆಟಗಾರರು ಬಂದಿದ್ದಾರೆ. 12, 14 ಮತ್ತು 16 ವರ್ಷ ಒಳಗಿನ ಬಾಲಕ ಬಾಲಕಿಯರಿಗಾಗಿ ನಡೆದ ಮುಕ್ತ ಪಂದ್ಯದಲ್ಲಿ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದು ಖುಷಿ ತಂದಿದೆ’ ಎಂದರು.
ಅವರು ‘ಲಕ್ಷ್ಮೇಶ್ವರದಲ್ಲಿ ಇಂಥ ಇಂಡೋರ್ ಗೇಮ್ಗಳನ್ನು ಸಂಘಟಿಸಲು ಜಾಗದ ಕೊರತೆ ಇದೆ. ಕಾರಣ ಶಾಸಕರು ಮತ್ತು ಪುರಸಭೆಯವರು ಜಾಗದ ವ್ಯವಸ್ಥೆ ಮಾಡಿಕೊಡಬೇಕು’ ಎಂದರು.
ಶಿಕ್ಷಕ ಎಂ.ಐ.ಕಣಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಟಿ. ಹೆಬ್ಬಾಳ ನಿರೂಪಿಸಿದರು. ಎಸ್.ಪಿ. ಕಟ್ಟೆಣ್ಣವರ ವಂದಿಸಿದರು.
ಈ ಸಂದರ್ಭದಲ್ಲಿ ಎಸ್.ಎಂ. ಉಮ್ಮಣ್ಣವರ, ನಿರ್ಣಾಯಕರಾದ ಮೋರೆ, ಚಂದ್ರಶೇಖರ ದೊಡ್ಡಮನಿ, ಶಿವಯ್ಯ ಕುಲಕರ್ಣಿ, ಶ್ರೀಕಾಂತ ಪೂಜಾರ, ಆದೇಶ ಹುಲಗೂರ, ಆರ್.ಎ. ಮುಲ್ಲಾ, ಎ.ಜೆ. ಬೂದಿಹಾಳ, ಮಂಜುನಾಥ ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.