ನರಗುಂದ: ಪಟ್ಟಣದ ಹುಬ್ಬಳ್ಳಿ ವಿಜಯಪುರ ರಸ್ತೆಗೆ ಹೊಂದಿಕೊಂಡ ಪಾಟೀಲ್ ಮೋಟರ್ಸ್ನ ಟಿವಿಎಸ್ ಸರ್ವೀಸ್ ಸೆಂಟರ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿದ್ದು ಬೈಕ್, ಕಂಪ್ಯೂಟರ್, ಲ್ಯಾಪ್ಟಾಪ್ಗಳು ಸುಟ್ಟು ಭಸ್ಮವಾದ ಘಟನೆ ಸೋಮವಾರ ನಡುರಾತ್ರಿ ನಡೆದಿದೆ.
ಕೆಳಗಿನ ಮಹಡಿ ಹಾಗೂ ಮೊದಲಿನ ಮಹಡಿಗೂ ಬೆಂಕಿ ಆವರಿಸಿದ್ದರ ಪರಿಣಾಮವಾಗಿ ಅಪಾರ ಹಾನಿ ಸಂಭವಿಸಿದೆ. 16 ಬೈಕ್ಗಳು ಸುಟ್ಟು ಕರಕಲಾಗಿವೆ. 2 ಕಂಪ್ಯೂಟರ್, 1 ಲ್ಯಾಪ್ಟಾಪ್, ಪೀಠೋಪಕರಣ, ಕೌಂಟರ್, ಏರ ಕಾಂಪೋಸರ್, 3 ಸರ್ವಿಸ್ ರ್ಯಾಂಪ್, ರಿಪೇರಿ ಮಾಡುವ ಸಾಮಗ್ರಿಗಳು, ವಾಹನಗಳ ಬಿಡಿಭಾಗಗಳು, ಹೈಡ್ರೋಲಿಕ್ ಪಂಪ್, ವಾಷಿಂಗ್ ಮೋಟರ್, ಸುಟ್ಟು ಸುಮಾರು ₹ 45 ಲಕ್ಷ ಹಾನಿಯಾಗಿದೆ.ಇದು ಪಟ್ಟಣದ ಸಿದ್ದನಗೌಡ ಸುಮಾಷಗೌಡ ಪಾಟೀಲ ಅವರಿಗೆ ಸೇರಿದೆ.
ಮೊದಲ ಮಹಡಿಯಲ್ಲಿರುವ ಕೆ.ಆರ್.ಐ.ಡಿ.ಎಲ್ ಕಚೇರಿಯಲ್ಲಿನ ಕಂಪ್ಯೂಟರ್ಗಳು, ಪ್ರಿಂಟರ್ಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳು, ಪಿಠೋಪಕರಣಗಳು ಬೆಂಕಿಯ ಝಳಕ್ಕೆ ಸುಟ್ಟು ಕರಗಿವೆ. ದಾಖಲಾತಿಗಳು ಭಸ್ಮವಾಗಿವೆ. ಇದರಿಂದ ₹ 5 ಲಕ್ಷ ಹಾನಿ ಸಂಭವಿಸಿದೆ. ಈ ಬೆಂಕಿಗೆ ಎಸ್.ಬಿ.ನಾಶಿಯವರಿಗೆ ಸೇರಿದ ಕಟ್ಟಡ ಜಖಂಗೊಂಡು ₹ 14 ಲಕ್ಷ ಹಾನಿಯಾಗಿದೆ. ಒಟ್ಟು ₹ 64 ಲಕ್ಷ ಹಾನಿ ಸಂಭವಿಸಿದೆ.
ಈ ಕುರಿತು ಸಿದ್ದನಗೌಡ ಪಾಟೀಲ ಮಂಗಳವಾರ ನರಗುಂದ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪಿಎಸ್ಐ ಸವಿತಾ ಮುನ್ಯಾಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.