ನರೇಗಲ್: ‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮಗೆ ಸಿಗುವ ಅಲ್ಪಮಟ್ಟದ ಅವಕಾಶಕ್ಕೆ ಸೀಮಿತವಾಗಿ ಬಿಡುತ್ತಾರೆ. ಆದರೆ ಛಲ ಬಿಡದೆ ಉನ್ನತ ವ್ಯಾಸಂಗದ ಜೊತೆಗೆ ಸಾಧಕರಾಗಿ ಹೊರಹೊಮ್ಮುತಾರೆ’ ಎಂದು ರೋಣ ಶಾಸಕ ಹಾಗೂ ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.
ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಮಧ್ಯಾಹ್ನ ನಡೆದ 2023-24ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್, ಎನ್ಸಿಸಿ, ರೇಂಜರ್ಸ್ -ರೋವರ್ಸ್, ಯುವ ರೆಡ್ ಕ್ರಾಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಬಿಎ, ಬಿಕಾಂ, ಬಿಎಸ್ಸಿ ಪದವಿಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
‘ಕಾಟಾಚಾರಕ್ಕೆ ಡಿಗ್ರಿ ಮಾಡುವ ವಿದ್ಯಾರ್ಥಿಗಳಾಗಬಾರದು. ಪಾಲಕರು ಇಟ್ಟಿರುವ ಭರವಸೆಗೆ ತಕ್ಕಂತೆ ಜೀವನವನ್ನು ರೂಪಿಸಿಕೊಳ್ಳಬೇಕು. ದೇಶದ ಜವಾಬ್ದಾರಿಯುತ ನಾಗರಿಕರಾಗಿ ಹೊರಹೊಮ್ಮಬೇಕು’ ಎಂದರು.
ಇಲ್ಲಿನ ಸರ್ಕಾರಿ ಪದವಿ ಕಾಲೇಜು ಆರಂಭವಾಗಿ ಕಡಿಮೆ ಅವಧಿಯಲ್ಲಿಯೇ ನ್ಯಾಕ್ ಬಿ+ ಗ್ರೇಡ್ ಪಡೆದಿರುವುದಕ್ಕೆ ಸಿಬ್ಬಂದಿ ವರ್ಗ ಅಭಿನಂದನೆಗೆ ಅರ್ಹರಾಗಿದ್ದಾರೆ. ಮುಂದೆ ‘ಎ’ ಶ್ರೇಣಿ ಸಿಗುವಂತೆ ಶ್ರಮ ವಹಿಸಬೇಕು ಎಂದು ಹೇಳಿದರು.
ಕಾಲೇಜಿನ ಅಭಿವೃದ್ದಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತಂದರೆ ಸರ್ಕಾರದಿಂದ ಅನುದಾನ ತರುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಹಾಗೂ ಸಿ.ಡಿ.ಸಿ ಸದಸ್ಯರು ಮಾಸಿಕ ಸಭೆಗಳನ್ನು ಕೈಗೊಂಡು ಕುಂದುಕೊರತೆಗಳ ಪಟ್ಟಿಯನ್ನು ನೀಡಬೇಕು ಎಂದರು.
ಪ್ರಾಂಶುಪಾಲ ಈ.ಆರ್.ಲಗಳೂರ ಅಧ್ಯಕ್ಷತೆ ವಹಿಸಿದ್ದರು. ಗುಡಗೇರಿಯ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಜಿ.ಸಿ. ಗುಮ್ಮಗೋಳಮಠ ಉಪನ್ಯಾಸ ನೀಡಿದರು.
ಶಿವನಗೌಡ ಪಾಟೀಲ, ಹನಮಂತಪ್ಪ ಅಬ್ಬಿಗೇರಿ, ಎಂ.ಎಸ್. ಧಡೆಸೂರಮಠ, ಡಾ.ಕೆ.ಬಿ.ಧನ್ನೂರ, ನಿಂಗನಗೌಡ ಲಕ್ಕನಗೌಡ್ರ, ಐಕ್ಯೂಎಸಿ ಸಂಚಾಲಕ ಎಸ್.ಎಲ್. ಗುಳೆದಗುಡ್ಡ, ಶೇಖಪ್ಪ ಜುಟ್ಲದ, ಶೇಖಪ್ಪ ಕೆಂಗಾರ, ಆನಂದ ನಡುವಲಕೇರಿ, ಅಲ್ಲಾಬಕ್ಷಿ ನದಾಫ್, ಯೂಸುಫ್ ಇಟಗಿ, ವೀರಪ್ಪ ಜೀರ್ಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.