ADVERTISEMENT

ಬೆಣ್ಣೆ ಹಳ್ಳದ ಪ್ರವಾಹ: ಸಾಗಾಣಿಕೆಯಲ್ಲಿಯೇ ರೇಷ್ಮೆ ಹುಳು ಸಾವು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:55 IST
Last Updated 17 ಅಕ್ಟೋಬರ್ 2024, 15:55 IST
ನರಗುಂದ ರೋಣ ಮಧ್ಯೆ ಯಾವಗಲ್ ಬೆಣ್ಣೆ ಹಳ್ಳ ತುಂಬಿ ಹರಿದಿದ್ದರಿಂದ ಸಂಚಾರ ಸ್ಥಗಿತವಾಗಿತ್ತು
ನರಗುಂದ ರೋಣ ಮಧ್ಯೆ ಯಾವಗಲ್ ಬೆಣ್ಣೆ ಹಳ್ಳ ತುಂಬಿ ಹರಿದಿದ್ದರಿಂದ ಸಂಚಾರ ಸ್ಥಗಿತವಾಗಿತ್ತು   

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರವೂ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಳಿಸಿತು.

ಮಳೆ ಜೋರಾಗಿ ಸುರಿದ ಪರಿಣಾಮ ಜಮೀನುಗಳು ಜಲಾವೃತವಾದವು. ಯಾವಗಲ್ ಸಮೀಪದ ಬೆಣ್ಣೆ ಹಳ್ಳ ಸೇತುವೆ ತುಂಬಿ ಹರಿದ ಪರಿಣಾಮ ಗುರುವಾರ ಬೆಳಗಿನವರೆಗೂ ಪ್ರಯಾಣಿಕರು ತೀವ್ರ ಪರದಾಡಿದರು. ಗುರುವಾರ ಶೀಗಿ ಹುಣ್ಣಿಮೆ ಪರಿಣಾಮ ರೋಣ ನರಗುಂದ ಮಾರ್ಗವಾಗಿ ಯಲ್ಲಮ್ಮನ ಗುಡ್ಡಕ್ಕೆ ತೆರಳುವ ಭಕ್ತರು ಹೆಚ್ಚಿನ ತೊಂದರೆಗೆ ಒಳಗಾದರು.

ರೇಷ್ಮೆ ಹುಳುಗಳ ಸಾವು: ಕುಷ್ಟಗಿಯಿಂದ ರೋಣ–ನರಗುಂದ ಮಾರ್ಗವಾಗಿ ರೇಷ್ಮೆ ಹುಳುಗಳನ್ನು ಟಾಟಾ ಎಸ್‌ ವಾಹನದ ಮೂಲಕ ಬೆಳಗಾವಿ ಜಿಲ್ಲೆ ಯರಗಟ್ಟಿಗೆ ಸಾಗಾಣಿಕೆ ಮಾಡಲಾಗುತ್ತಿತ್ತು. ಆದರೆ ವಾಹನ ಬುಧವಾರ ರಾತ್ರಿ ಯಾವಗಲ್ ಸಮೀಪ ಬರುತ್ತಲೇ ಬೆಣ್ಣೆ ಹಳ್ಳ ತುಂಬಿದ ಪರಿಣಾಮ ಸಂಚಾರ ಸ್ಥಗಿತಗೊಂಡಿತು. ಇದರಿಂದ 12 ತಾಸಿನೊಳಗೆ ರೇಷ್ಮೆ ಗೂಡು ಸೇರಬೇಕಿದ್ದ 142 ಟ್ರೇಗಳಲ್ಲಿದ್ದ ಸುಮಾರು 8 ಸಾವಿರ ರೇಷ್ಮೆ ಹುಳುಗಳು ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಯಿತು. ಹುಳುಗಳ ಸಾಗಾಣಿಕೆ ಮಾಡುತ್ತಿದ್ದ ಯರಗಟ್ಟಿಯ ಸಿದ್ದೇಶ ಹೂಗಾರ ಹಾಗೂ ಅವನ ಜೊತೆ ಸಹಚರ ಸೇರಿ ರಾತ್ರಿಯಿಡೀ ಬೆಣ್ಣೆ ಹಳ್ಳದ ದಡದಲ್ಲಿಯೇ ಬೀಡು ಬಿಟ್ಟಿದ್ದರು.

ADVERTISEMENT

ರೇಷ್ಮೆ ಹುಳುಗಳು ಸಾವನ್ನಪ್ಪಿದ್ದರಿಂದ ಸುಮಾರು ₹1 ಲಕ್ಷ ನಷ್ಟ ಉಂಟಾಗಿದೆ ಎಂದು ಸಿದ್ದೇಶ ಹೂಗಾರ ಹೇಳಿದರು.

ಬೆಳೆ ಹಾನಿ: ಅತಿವೃಷ್ಟಿ ಹಾಗೂ ಪ್ರವಾಹದ ಪರಿಣಾಮ ಮಲಪ್ರಭಾ ಹೊಳೆಯಂಚಿನ ಹಾಗೂ ಬೆಣ್ಣೆ ಹಳ್ಳದ ದಡದಲ್ಲಿರುವ ಸಾವಿರಾರು ಹೆಕ್ಟೇರ್ ಭೂಮಿ ಜಲಾವೃತವಾಗಿ ಬೆಳೆ ಹಾನಿ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.