ಗದಗ: ಕಾವ್ಯರಚನೆಯಲ್ಲಿ ತೊಡಗುವ ಇಂದಿನ ಯುವಜನತೆ ವಾಸ್ತವತೆ ಮತ್ತು ಸಾಮಾಜಿಕ ಕಾಳಜಿಯನ್ನು ಕೇಂದ್ರವನ್ನಾಗಿಸಿಕೊಂಡು ಜನಮುಖಿ ಕಾವ್ಯ ರಚಿಸಬೇಕು ಎಂದು ಕವಿ ವೀರಣ್ಣ ಮಡಿವಾಳರು ತಿಳಿಸಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ವಿದ್ಯಾರ್ಥಿಗಳೊಂದಿಗೆ ಕವಿ-ಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಕಾವ್ಯ ಪರಂಪರೆಗೆ ದೊಡ್ಡ ಇತಿಹಾಸ ಇದೆ. ಕಾವ್ಯ ಲೋಕದ ಹಿಂದಿನ ಈ ಪರಂಪರೆಯನ್ನು ಯುವಕವಿಗಳು ಮುಂದುವರೆಸಬೇಕು. ಇಂದಿನ ಕಾವ್ಯದಲ್ಲಿ ಸಮಕಾಲೀನತೆ ಬಹುಮುಖ್ಯ ಗುಣವಾಗಿ ಗುರುತಿಸಿಕೊಂಡಿದೆ. ಅದರೊಂದಿಗೆ ಚರಿತ್ರೆ ಪುರಾಣದ ಸಂಗತಿಗಳನ್ನೂ ಕಾವ್ಯ ಮೇಳೈಸಿಕೊಳ್ಳುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಉಪ ಪ್ರಾಚಾರ್ಯೆ ವೀಣಾ, ಕನ್ನಡದ ಕಾವ್ಯ ಪರಂಪರೆ ಜಗತ್ತಿಗೆ ಮಾದರಿಯಾಗಿದ್ದು, ನಾವೆಲ್ಲರೂ ಕಾವ್ಯ ಬೆಳೆಸುವ ಕಡೆ ಮುಖ ಮಾಡಬೇಕು ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಅಂದಯ್ಯ ಅರವಟಗಿಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.