ಗಜೇಂದ್ರಗಡ: ಸಮೀಪದ ರಾಜೂರ ಗ್ರಾಮದ ಮುಜಾವರ ಸಹೋದರರು ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಮೆಣಸಿನಕಾಯಿ ಬೆಳೆ ಬೆಳೆದು ಕಳೆದೆರಡು ವರ್ಷಗಳಿಂದ ಉತ್ತಮ ಲಾಭ ಗಳಿಸುತ್ತಿದ್ದು, ದೀರ್ಘಾವಧಿಯ ದ್ರಾಕ್ಷಿ ಬೆಳೆಯಲ್ಲಿ ಕೈತುಂಬ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಗ್ರಾಮದ ಮಹ್ಮದರಫಿ ಮುಜಾವರ, ದಾವಲಸಾಬ ಮುಜಾವರ ಸಹೋದರರು ತಮ್ಮ ಪ್ರತ್ಯೇಕ ಎರಡು ಜಮೀನುಗಳ ಒಟ್ಟು 4.5 ಎಕರೆ ಜಮೀನಿನ ಪೈಕಿ 1 ಎಕರೆ ದ್ರಾಕ್ಷಿ, 3.5 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ತಮ್ಮ ಒಂದು ಎಕರೆ ಜಮೀನಿನಲ್ಲಿ ಮಹಾರಾಷ್ಟ್ರದ ತಿಕೋಟಾದಿಂದ 725 ದ್ರಾಕ್ಷಿ ಸಸಿಗಳನ್ನು ತಂದು ನಾಟಿ ಮಾಡಿ, ವಿಜಯಪುರದಿಂದ ದ್ರಾಕ್ಷಿ ಕಡ್ಡಿಗಳನ್ನು ತಂದು ಕಸಿ ಮಾಡಿದ್ದಾರೆ. ಸಸಿ ನಾಟಿ ಮಾಡುವುದು, ದ್ರಾಕ್ಷಿ ಬಳ್ಳಿ ಹಬ್ಬಿಸಲು ಕಂಬ, ತಂತಿ ಹಾಕುವುದು ಸೇರಿದಂತೆ ಸುಮಾರು ₹6ರಿಂದ ₹7 ಲಕ್ಷ ಖರ್ಚು ಮಾಡಿದ್ದಾರೆ. ಕಳೆದ ವರ್ಷದಿಂದ ಫಸಲು ಬರುತ್ತಿದ್ದು, ಕಳೆದ ವರ್ಷ 3 ಟನ್ ದ್ರಾಕ್ಷಿ ಹಣ್ಣಿನಿಂದ ₹1.35 ಲಕ್ಷ ಬಂದಿದೆ. ಈ ಬಾರಿಯೂ ಸುಮಾರು 4 ಟನ್ ದ್ರಾಕ್ಷಿ ಹಣ್ಣು ಬರುವ ನಿರೀಕ್ಷೆಯಿದೆ.
ಲಾಭ ತಂದ ಮೆಣಸಿನಕಾಯಿ ಬೆಳೆ
ಮುಜಾವರ ಸಹೋದದರು ಕೆಳೆದ ಮೂರು ವರ್ಷಗಳಿಂದ ಮೆಣಸಿನಕಾಯಿ ಬೆಳೆ ಬೆಳೆಯುತ್ತಿದ್ದು, ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ 1.5 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದ ಸಹೋದದರು ಈ ಬಾರಿ 3.5 ಎಕರೆಗೆ ವಿಸ್ತರಿಸಿದ್ದಾರೆ. ಕಳೆದ ವರ್ಷ ₹2.5 ಲಕ್ಷ ಲಾಭ ಗಳಿಸಿದ್ದಾರೆ. ಈ ಬಾರಿ ರೋಗಬಾಧೆ, ಮಳೆ ಕೊರತೆಯಿಂದ ಸರಿಯಾಗಿ ಫಸಲು ಬರದಿದ್ದರೂ ಸಹ ₹3 ಲಕ್ಷ ಲಾಭ ಗಳಿಸಿದ್ದಾರೆ.
‘ಸದ್ಯ ಎಲ್ಲ ಕಡೆ ಮೆಣಸಿನಕಾಯಿ ಪುಡಿಗೆ ಬೇಡಿಕೆ ಇರುವುದರಿಂದ ಮೆಣಸಿನಕಾಯಿಗೆ ಉತ್ತಮ ಬೆಲೆ ಇದೆ. ಮೆಣಸಿನಕಾಯಿ ಬೀಜ ಬಿತ್ತನೆಯಿಂದ ಫಸಲು ಬರುವವರೆಗೂ ಕಠಿಣ ಪರಿಶ್ರಮದಿಂದ ಸರಿಯಾಗಿ ನಿರ್ವಹಣೆ ಮಾಡಿದರೆ ಮಾತ್ರ ಉತ್ತಮ ಫಸಲು ಪಡಯಬಹುದು’ ಎನ್ನುತ್ತಾರೆ ರೈತ ಮಹ್ಮದರಫಿ ಮುಜಾವರ.
ದ್ರಾಕ್ಷಿ ದೀರ್ಘಾವಧಿ ಬೆಳೆಯಾಗಿದ್ದು ಆರಂಭದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಮರ್ಪಕ ನಿರ್ವಹಣೆಮಾಡಿದರೆ 3-4 ವರ್ಷಗಳ ನಂತರ ಉತ್ತಮ ಫಸಲು ಬರುತ್ತದೆ- ದಾವಲಸಾಬ ಮುಜಾವರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.