ಶಿರಹಟ್ಟಿ: 'ಸುಳ್ಳಿನ ಗ್ಯಾರಂಟಿಗಳ ನಡುವೆ ಖಜಾನೆ ಖಾಲಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣಾ ಪೂರ್ವದಲ್ಲಿ ಕೇವಲ ಮಹಿಳೆಯರು ಮಾತ್ರ ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕಿಲ್ಲ. ಪುರುಷರೂ ಮತ ಚಲಾಯಿಸಿದ್ದಾರೆ. ಆದರೆ ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರಿಗಷ್ಟೆ ಜಾರಿ ಮಾಡಿದ್ದು, ಅದನ್ನು ಪುರುಷರಿಗೂ ನೀಡಲಿ’ ಎಂದು ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಗ್ಯಾರಂಟಿ ನೆಪದಲ್ಲಿ ರಾಜ್ಯದ ಬೊಕ್ಕಸ ಖಾಲಿ ಮಾಡಿದೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಸಿಗುತ್ತಿಲ್ಲ, ಹಳೇ ಡಕೋಟಾ ಬಸ್ ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಮತ್ತು ಪಡಿತರ ಚೀಟಿದಾರರಿಗೆ 10 ಕಿ.ಲೋ. ಅಕ್ಕಿ ಸಿಗುತ್ತಿಲ್ಲ. ರಾಜ್ಯದ ಶೇ. 70 ರಷ್ಟು ಜನರಿಗೆ ಈ ಗ್ಯಾರಂಟಿ ಯೋಜನೆಯ ಲಾಭ ಇನ್ನೂ ತಲುಪಿಲ್ಲ, ಆದರೂ ರಾಜ್ಯ ಸರ್ಕಾರ ಎಸ್ಸಿ,ಎಸ್ಟಿ ಸಮುದಾಯ ಅಭಿವೃದ್ಧಿಗೆ ಮೀಸಲಾದ ಎಸ್ ಸಿಪಿ/ಟಿಎಸ್ ಪಿ ಯೋಜನೆಯ ₹11 ಸಾವಿರ ಕೋಟಿ ಅನುದಾನವನ್ನು ಸಂಪೂರ್ಣ ಬಳಸಿಕೊಂಡು ಎಸ್ಸಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಹಲವಾರು ಯೋಜನೆಗಳನ್ನು ರೂಪಿಸಿ ಜನರ ಮನಸ್ಸಲ್ಲಿ ಅಚ್ಚಳಿಯದ ಹಾಗೇ ಉಳಿದ ಎಚ್.ಡಿ. ಕುಮಾರಸ್ವಾಮಿ ಸರ್ಕಾರವನ್ನು ರಾಜ್ಯದ ಜನರು ಮರೆತಿಲ್ಲ. ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೆ ಜೀವಾಳವಾಗಿದ್ದು, ಪಕ್ಷವನ್ನು ತಳಮಟ್ಟದಿಂದ ಬಲವರ್ಧನೆ ಪಡಿಸಲು ಅವರು ಮಾಡಿದ ರೈತರ ಬೀಜ ಗೊಬ್ಬರದ ಸಬ್ಸಿಡಿ, ಭಾಗ್ಯ ಲಕ್ಷ್ಮಿ ಬಾಂಡ್, ಬಡವರಿಗೆ ಉಚಿತ ಸೂರು ಹಾಗೂ ಗ್ರಾಮ ವಾಸ್ತವ್ಯದಂತಹ ಜನಪರ ಯೋಜನೆಗಳ ಕುರಿತು ಜನರಿಗೆ ತಿಳಿಸು ಕಾರ್ಯ ನಡೆಯಬೇಕಿದೆ. ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ಜೆಡಿಎಸ್ ಪಕ್ಷದ ಶಕ್ತಿ ಹೆಚ್ಚಿಸಬೇಕು ಎಂದು ಹೇಳಿದರು.
ಈ ವೇಳೆ ರಾಜ್ಯ ವಕ್ತಾರ ಗೋವಿಂದಗೌಡ್ರು, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಜಿಲ್ಲಾಧ್ಯಕ್ಷ ಮುಕ್ತುಂಸಾಬ ಮುಧೋಳ, ಮಹಿಳಾ ಜಿಲ್ಲಾಧ್ಯಕ್ಷಿ ಮಂಜುಳಾ ಮೇಟಿ, ಗುರುರಾಜ ಹುಣಿಸಿಮರದ, ಪರ್ವತಗೌಡ್ರ ಪಾಟೀಲ, ಜಾಕಿರ್ ಹವಾಲ್ದಾರ, ಪ್ರವೀಣ ಬಾಳಿಕಾಯಿ, ಪ್ರಕಾಶ ದೊಡ್ಡಮನಿ, ಮಂಜು ದೊಡ್ಡಮನಿ, ವಿನಾಯಕ ಪರಬತ, ಲಕ್ಷ್ಮಣ ನಾಯಕ, ದೇವಪ್ಪ ಮಲಸಮುದ್ರ, ಶಂಕ್ರಣ ಬಾಳಿಕಾಯಿ, ಹಾಜಾಲಿ ಕೊಪ್ಪಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.