ಮುಳಗುಂದ: ಜಗತ್ತಿನಲ್ಲಿ ತಂದೆ ತಾಯಿಗಿಂತ ಮಿಗಿಲಾದವರು ಗುರುಗಳು. ಬ್ರಹ್ಮ ಜನ್ಮದ ಮೂಲವಾದರೆ ಆತನಿಗಿಂತ ಅದ್ವತಿಯನಾದವನು ಗುರು ಎಂದು ಪಟ್ಟಣದ ಆರ್.ಎನ್.ಡಿ. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ ಕಲ್ಲನಗೌಡ್ರ ಅಭಿಪ್ರಾಯಪಟ್ಟರು.
ಇಲ್ಲಿನ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಎಸ್.ಜೆ.ಜೆ.ಎಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ 2000-2001ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಭಾನುವಾರ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭೂತ ಭವಿಷ್ಯತ್ತನ್ನು ಜೋಡಿಸುವ ಕೊಂಡಿ ಗುರು. ಗುರು ಹೇಳಿದ್ದನ್ನು ಶಿರಸಾ ವಹಿಸಿ ಮಾಡುವವ ಶಿಷ್ಯ. ಶಿಷ್ಯನ ಸಂಕುಚಿತ ಮನಸ್ಸನ್ನು ವಿಶಾಲಗೊಳಿಸುವವ ಗುರು ಎಂದು ನುಡಿದರು.
ಸಾನ್ನಿಧ್ಯ ವಹಿಸಿದ್ದ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಮಾತನಾಡಿ,
ಕಲಿತ ಶಾಲೆ,ಕಲಿಸಿದ ಗುರುಗಳ ನೆನೆಯುವ ಇಂತಹ ಸಮ್ಮೀಲನ ಕಾರ್ಯಕ್ರಮಗಳು ಪ್ರತಿ ಊರಲ್ಲೂ ನಡೆಯಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಶಿಕ್ಷಕ ಆರ್.ಆರ್.ಪಟ್ಟಣ ಮಾತನಾಡಿ, ಜನ್ಮ ನೀಡಿದ ತಂದೆ ತಾಯಂದಿರನ್ನು ನಿರ್ಲಕ್ಷಿಸದೇ ಗೌರವ ನೀಡಬೇಕು ಅಂದಾಗ ಮಾತ್ರ ನಿಮ್ಮ ಜೀವನ ಸಾರ್ಥಕವಾಗುತ್ತದೆ. ಎಂದರು.
ನಿಧನರಾದ ಶಿಕ್ಷಕರಿಗೆ, ಸಹಪಾಠಿಗಳಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ನಂತರ ಎಸ್.ಜೆ.ಜೆ.ಎಂ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಎಲ್ಲ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಸಂಸ್ಥೆಯ ಚೇರಮನ್ ಎಂ.ಡಿ.ಬಟ್ಟೂರ, ಗೌರಮ್ಮ ಬಡ್ನಿ, ಪ್ರಾಚಾರ್ಯ ಎ.ಎಂ.ಅಂಗಡಿ, ಇ.ಎಂ.ಗುಳೇದಗುಡ್ಡ, ಎಸ್.ಸಿ.ಚವಡಿ, ಕ್ರೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ, ನಿವೃತ್ತ ಶಿಕ್ಷಕರಾದ ಜಿ.ಆರ್.ಗದಗ, ಎಸ್.ಎಫ್. ಮುದ್ದನಗೌಡ್ರ, ಬಾಪೂಜಿ ಯಳವತ್ತಿ ಹಾಗೂ 2000-2001ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
ಇದೆ ವೇಳೆ 2000-2001ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಕಾಲೇಜಿಗೆ ಸೌಂಡ್ ಸಿಸ್ಟಮ್ ದೇಣಿಗೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.