ಗದಗ: ‘ವಿದ್ಯಾರ್ಥಿಗಳು ಒಳ್ಳೆಯ ಜನರ ಜತೆಗೆ ಸ್ನೇಹ ಮಾಡಬೇಕು. ತಂದೆ ತಾಯಿಯನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಉತ್ತಮ ಜೀವನಶೈಲಿ, ಆಹಾರ ಪದ್ಧತಿ ರೂಢಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು’ ಎಂದು ಜಿಮ್ಸ್ನ ವೈದ್ಯ ಡಾ. ಅರವಿಂದ ಕರಿನಾಗಣ್ಣವರ ಹೇಳಿದರು.
ತಾಲ್ಲೂಕಿನ ಹುಲಕೋಟಿ ಗ್ರಾಮದ ಆರ್ಟಿಇ ಸೊಸೈಟಿಯ ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ನಡೆದ ಇಂಡಕ್ಷನ್ ಪ್ರೋಗ್ರಾಂ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ದುಷ್ಟ ಚಟಗಳಿಂದ ದೂರವಿದ್ದು, ಉತ್ತಮ ಆಲೋಚನೆ ಹೊಂದಬೇಕು. ಸಂಸ್ಕಾರಯುತ ಗುಣ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಕೆ.ಎಚ್.ಓದುಗೌಡ ಮಾತನಾಡಿ, ‘ಡಾ. ಅರವಿಂದ ಕರಿನಾಗಣ್ಣವರ ಅವರು ಇವರೆಗೆ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ದುಶ್ಚಟಗಳಿಂದ ಮುಕ್ತರಾಗಿಸಿದ್ದಾರೆ. ಅವರ ಈ ಕೆಲಸಕ್ಕೆ ಭಾರತೀಯ ವೈದ್ಯಕೀಯ ಸಂಘವು ‘ಡಾ. ಕೇತನ ದೇಸಾಯಿ ಯುವ ನಾಯಕ ಪ್ರಶಸ್ತಿ’ ನೀಡಿ ಗೌರವಿಸಿದೆ’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೊ. ಟಿ.ಜಿ.ಕಾಟೆವಾಲ್, ಪ್ರೊ. ಎಸ್. ವೈ.ಅಗಸನಕೊಪ್ಪ. ಪ್ರೊ. ಮಂಜುನಾಥ ಎಚ್.ಓ. ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳು ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ ಪಾಲ್ಗೊಂಡಿದ್ದರು.
ಟೆಕ್ಸ್ಟೈಲ್ ವಿಭಾಗದ ಮುಖ್ಯಸ್ಥ ಎನ್.ಎಸ್.ಬೊಮ್ಮಣ್ಣಿ ಕಾರ್ಯಕ್ರಮ ನಿರೂಪಿಸಿದರು. ಎಂ.ಕೆ.ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.