ರೋಣ: ಆಡಳಿತ ವಿಕೇಂದ್ರೀಕರಣ ತತ್ವದಡಿ ಸ್ಥಾಪಿಸಲಾದ ಸ್ಥಳೀಯ ಆಡಳಿತಗಳು ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರಾಸಕ್ತಿ ಹೊಂದಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಣ ಪುರಸಭೆ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಬೀದಿದೀಪಗಳು ಕೆಟ್ಟು ಹೋಗಿ, ಸಂಪೂರ್ಣ ತುಕ್ಕು ಹಿಡಿಯುವತ್ತಿದ್ದರೂ ಪುರಸಭೆ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ರೋಣ ಪಟ್ಟಣದಲ್ಲಿ ಅಳವಡಿಸಿರುವ ಬಹುತೇಕ ಎಲ್ಲ ಹೈಮಾಸ್ಟ್ ವಿದ್ಯುತ್ ದೀಪಗಳು ಕೆಟ್ಟು ಹೋಗಿದ್ದು, ಸದ್ಯ ದೀಪಗಳೇ ಇಲ್ಲದ ಕಂಬಗಳು ಮಾತ್ರ ಪುರಸಭೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ ನಿಂತಿವೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಗ್ರಾಮೀಣ ಪ್ರದೇಶದ ಮೂಲಸೌಲಭ್ಯಗಳ ಹೊಣೆ ಹೊತ್ತ ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ಉಪ ವಿಭಾಗ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿವೆ ಎಂದು ದೂರಿದ್ದಾರೆ.
ಜಿಲ್ಲಾ ಪಂಚಾಯ್ತಿ ಎಂಜನಿಯರಿಂಗ್ ಉಪ ವಿಭಾಗ ರೋಣ– ನವಲಗುಂದ ಮುಖ್ಯರಸ್ತೆಯಿಂದ ಬಾಸಲಾಪುರದವರೆಗೆ ₹5 ಲಕ್ಷ ವೆಚ್ಚದಲ್ಲಿ 2023–24ನೇ ಸಾಲಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಇಲಾಖೆಯ ಕಾರ್ಯವೈಖರಿಗೆ ಜನತೆ ಛೀಮಾರಿ ಹಾಕುತ್ತಿದ್ದಾರೆ. ಅದೇರೀತಿ, ತಾಲ್ಲೂಕಿನ ಹೊಳೆಆಲೂರು ಗ್ರಾಮದಲ್ಲಿ 2022–23ನೇ ಸಾಲಿನಲ್ಲಿ ತಾಲ್ಲೂಕು ಪಂಚಾಯ್ತಿ ಅನುದಾನದಲ್ಲಿ ಗ್ರಾಮದ ಶಿವ ಪಾರ್ವತಿ ಕಲ್ಯಾಣ ಮಂಟಪದಿಂದ ಬಾದಾಮಿ ರಸ್ತೆವರೆಗೆ ₹5 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮಂಜೂರಾಗಿ ಬಿಲ್ ಕೂಡ ಪಾವತಿಸಲಾಗಿದ್ದು ರಸ್ತೆ ಮಾತ್ರ ನಾಪತ್ತೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.