ADVERTISEMENT

ಕಾಂಗ್ರೆಸ್ ‌40 ಸ್ಥಾನವನ್ನೂ ಗೆಲ್ಲಲ್ಲ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 15:43 IST
Last Updated 23 ಏಪ್ರಿಲ್ 2024, 15:43 IST
ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಗದಗ- ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ರ್‍ಯಾಲಿ ನಡೆಸಿದರು
ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಗದಗ- ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ರ್‍ಯಾಲಿ ನಡೆಸಿದರು   

ಶಿರಹಟ್ಟಿ: ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಹೋಲ್‌ಸೇಲ್‌ ಆಗಿ ಮೋಸ ಮಾಡಲು ನಿಂತಿದ್ದು, ರೈತರ ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆ ಸ್ಥಗಿತಗೊಳಿಸಿದೆ. ಬರ ಪರಿಸ್ಥಿತಿಯಲ್ಲಿ ಒಂದು ರೂಪಾಯಿಯನ್ನೂ ನೀಡದ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ 40 ಸ್ಥಾನವನ್ನೂ ಸಹ ಗೆಲ್ಲುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಯಳವತ್ತಿ, ಮಾಗಡಿ, ಕಡಕೋಳ, ಬನ್ನಿಕೊಪ್ಪ, ಮಾಚೇನಹಳ್ಳಿ ಗ್ರಾಮಗಳಲ್ಲಿ ಮಂಗಳವಾರ ರ್‍ಯಾಲಿ ಮೂಲಕ ಮತಯಾಚನೆ ಮಾಡಿ ಮಾತನಾಡಿದರು.

‘ಕಾಂಗ್ರೆಸ್ ಪಕ್ಷದವರು ಹೆಣ್ಣುಮಕ್ಕಳಿಗೆ ₹1 ಲಕ್ಷ ಕೊಡುತ್ತೇವೆ ಎಂದು ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಪ್ರಣಾಳಿಕೆ ಮಾಡಲಿ ಆದರೆ, ಗ್ಯಾರಂಟಿ ಕಾರ್ಡ್ ಕೊಟ್ಟು ಸುಳ್ಳು ಡೋಂಗಿ ಮಾಡುವುದಕ್ಕೆ ಶುರುಮಾಡಿದ್ದು, ಇದು ಕಾನೂನು ವಿರುದ್ಧ’ ಎಂದು ಗ್ಯಾರಂಟಿ ಕಾರ್ಡ್ ವಿರುದ್ಧ ಹರಿಹಾಯ್ದರು.

ADVERTISEMENT

‘ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗ್ಯಾರೆಂಟಿ ‌ಕಾರ್ಡ್‌ಗಳಿಗೆ ಸಹಿ ಮಾಡಿ ಕೊಡುತ್ತಿದ್ದಾರೆ. ಅವರೇನು ಈ ದೇಶದ ಪ್ರಧಾನಿನಾ, ರಾಷ್ಟ್ರಪತಿನಾ, ಅವರು ಕೊಡುವ ಗ್ಯಾರೆಂಟಿಗೆ ಯಾವುದೇ ಮರ್ಯಾದೆ ಇಲ್ಲ. ಅವರು ಕೊಡುವ ಗ್ಯಾರೆಂಟಿ ಕಾರ್ಡ್‌ಗಳನ್ನು ಹರಿದು ಹಾಕಿ’ ಎಂದು ಹೇಳಿದರು.

‘ಲೋಕಸಭೆಯಲ್ಲಿ 543 ಸ್ಥಾನಗಳಿದ್ದು, ಬಹುಮತಕ್ಕೆ 272 ಸ್ಥಾನಬೇಕು. ಕಾಂಗ್ರೆಸ್ ಸ್ಪರ್ಧೆ ಮಾಡಿರುವುದೇ 230 ಸ್ಥಾನಗಳಿಗೆ. ಕಾಂಗ್ರೆಸ್ ಬಹುಮತ ಬರುವುದಿಲ್ಲ. ಕಾಂಗ್ರೆಸ್‌ಗೆ 40 ಕ್ಕಿಂತ ಹೆಚ್ಚು ಸ್ಥಾನ ಸಿಗುವುದಿಲ್ಲ. ರೈತರಿಗೆ, ಬಡವರಿಗೆ, ದಲಿತರಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ರಾಜ್ಯವನ್ನು ಆಳುವ ನೈತಿಕತೆ ಕಳೆದುಕೊಂಡಿದೆ’ ಎಂದು ವಾಗ್ದಾಳಿ ನಡೆಸಿದರು.

ಚುನಾವಣಾ ಪ್ರಚಾರದಲ್ಲಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಗದಗ- ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ರ್‍ಯಾಲಿ ನಡೆಸಿದರು

‘ಋಣ ತೀರಿಸುವ ಸಮಯ’

‘ಪ್ರಧಾನಿ ಮೋದಿ ದಿನಕ್ಕೆ 18 ಗಂಟೆ‌‌ ಕೆಲಸ ಮಾಡುತ್ತಾರೆ. ಸಾಮಾನ್ಯ ಬಡ ಕುಟುಂಬದಿಂದ ಬಂದ ಅವರು ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲೆ ತಂದಿದ್ದಾರೆ. ಮೋದಿಯವರು ಅಸಾಧ್ಯ ಎನ್ನುವುದನ್ನು ಸಾಧ್ಯ ಮಾಡಿದ್ದಾರೆ. ಭಯೋತ್ಪಾನೆಯನ್ನು ಸಂಪೂರ್ಣ ನಿರ್ಣಾಮ‌ ಮಾಡಿದ್ದಾರೆ. ಕೊವಿಡ್ ಸಂದರ್ಭದಲ್ಲಿ ದೇಶದ 130 ಕೋಟಿ ಜನರಿಗೆ ಉಚಿತ ಲಸಿಕೆ ಕೊಟ್ಟು ಪ್ರಾಣ ಉಳಿಸಿದ್ದಾರೆ. ಅಮೇರಿಕಾ ದೇಶದಲ್ಲಿ ಒಂದು ಲಸಿಕೆಗೆ ₹30 ಸಾವಿರ ಇದೆ. ಮೋದಿಯವರು ಎಲ್ಲರಿಗೂ‌ ಉಚಿತವಾಗಿ ಮೂರು ಬಾರಿ ಲಸಿಕೆ ಕೊಟ್ಟಿದ್ದಾರೆ. ಪ್ರಾಣ ಉಳಿಸಿದವರ ಋಣ ತೀರಿಸಲು ಬಿಜೆಪಿಗೆ ಮತ ಹಾಕಿ ಗೆಲ್ಲಿಸೋಣ’ ಎಂದರು. ‘ನಾನು ಈ ಕ್ಷೇತ್ರದ ಸಂಸದನಾಗಿ ಆಯ್ಕೆಯಾಗಿ ನನ್ನ ಮೂವತೈದು ವರ್ಷದ ರಾಜಕೀಯ ಅನುಭವವನ್ನು ಈ‌ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡುತ್ತೇನೆ. ಈ ಭಾಗಕ್ಕೆ ಅನುಕೂಲವಾಗುವ ನೀರಾವರಿ ಯೋಜನೆ ಕೈಗಾರಿಕೆಗಳನ್ನು ತರುವ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಜನರ ಧ್ವನಿಯಾಗಿ ಸಂಸತ್ತಿನಲ್ಲಿ ಸಿಂಹಘರ್ಜನೆ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.