ಲಕ್ಷ್ಮೇಶ್ವರ: ಕಳೆದ ಮೂರು ತಿಂಗಳಿಂದ ಬಂದ್ ಆಗಿದ್ದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ಜನೌಷಧ ಕೇಂದ್ರದ ಕೊನೆಗೂ ಬಾಗಿಲು ತೆರೆದಿದೆ. ಕೇಂದ್ರ ಬಂದ್ ಆಗಿದ್ದರಿಂದ ಬಡ ರೋಗಿಗಳಿಗೆ ತೀವ್ರ ತೊಂದರೆ ಆಗಿತ್ತು. ಆದಷ್ಟು ಬೇಗನೆ ಕೇಂದ್ರ ಆರಂಭಿಸಬೇಕು ಎಂದು ಜನ ಒತ್ತಾಯಿಸುತ್ತಲೇ ಇದ್ದರು. ಎದುರಾಗಿದ್ದ ತಾಂತ್ರಿಕ ತೊಂದರೆ ನಿವಾರಣೆ ಆದ ಹಿನ್ನೆಲೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಭಾನುವಾರ ಕೇಂದ್ರವನ್ನು ಪುನಃ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ‘ಜನೌಷಧ ಕೇಂದ್ರ ಬಂದ್ ಆಗಿದ್ದರಿಂದ ವಿಶೇಷವಾಗಿ ಬಡ ರೋಗಿಗಳಿಗೆ ಬಹಳಷ್ಟು ತೊಂದರೆ ಉಂಟಾಗಿತ್ತು. ದುಬಾರಿ ದರದಲ್ಲಿ ಔಷಧಿ ಖರೀದಿಸಲು ಆಗದೇ ಅವರು ನರಳುವಂತಾಗಿತ್ತು. ತಾಲ್ಲೂಕಿನ ಬಹಳಷ್ಟು ಜನರು ಕೇಂದ್ರ ಆರಂಭಿಸುವಂತೆ’ ಆಗ್ರಹಿಸಿದ್ದರು.
‘ಸದ್ಯ ಕೇಂದ್ರ ಆರಂಭವಾಗಿದ್ದು ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಕೇಂದ್ರದಲ್ಲಿ ಎಲ್ಲ ರೀತಿಯ ಔಷಧಗಳು ದೊರೆಯುವಂತೆ ನೋಡಿಕೊಳ್ಳಬೇಕು. ಮತ್ತು ರೋಗಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುನಿಲ ಮಹಾಂತಶೆಟ್ಟರ, ಸಿದ್ದು ಸವಣೂರ, ನವೀನ್ ಬೆಳ್ಳಟ್ಟಿ, ಐ.ಕೆ.ಹೊನ್ನಪ್ಪನವರ, ದುಂಡೇಶ ಕೊಟಗಿ, ಮಂಜುನಾಥ ಉಮಚಗಿ, ದೇವಣ್ಣ ನಂದೆಣ್ಣವರ, ಗಿರೀಶ ಅಗಡಿ, ರಂಗು ಬದಿ, ಅನಿಲ ಮುಳಗುಂದ, ವಿಶಾಲ್ ಬಟಗುರ್ಕಿ, ಗಿರೀಶ ಚೌರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.