ಗದಗ: ‘ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸಿಎಂ ಇಳಿಸುವ ಸೂತ್ರಧಾರರೇ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸುವ ವಿಷಯ ಕುರಿತು ಮಾತನಾಡಿದ್ದ ಆರ್.ಅಶೋಕ ಅವರಿಗೆ ಭಾನುವಾರ ನಗರದಲ್ಲಿ ತಿರುಗೇಟು ನೀಡಿದರು.
‘ಬಿಜೆಪಿಯಲ್ಲಿ ಮೂವರು ಸಿಎಂಗಳನ್ನು ಇಳಿಸಿದ್ದರಲ್ಲಾ ಅದಕ್ಕೆ ಆರ್.ಅಶೋಕ ಉಸ್ತುವಾರಿ ವಹಿಸಿದ್ದರೇ? ಬಿಜೆಪಿ ನಾಯಕರು ಆರ್.ಅಶೋಕ ಅವರಿಗೆ ಉತ್ತಮ ಸ್ಥಾನ ಕೊಟ್ಟಿದ್ದಾರೆ. ಸರ್ಕಾರದ ಕೆಲಸವನ್ನು ರಚನಾತ್ಮಕವಾಗಿ ಪ್ರಶ್ನಿಸುವ ಮೂಲಕ ಉತ್ತಮ ಕೆಲಸ ಮಾಡಿಕೊಂಡು ಹೋಗಲಿ. ಮುಂದೆ ಲೋಕಸಭಾ ಚುನಾವಣೆ ಇದೆ. ಅದರ ಬಗ್ಗೆ ಯೋಚನೆ ಮಾಡಲಿ’ ಎಂದು ಸಲಹೆ ನೀಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲಿನ ಸಿಬಿಐ ತನಿಖೆ ಪ್ರಕರಣ ಹಿಂಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾನೂನು ಸಚಿವ ಎಚ್.ಕೆ.ಪಾಟೀಲ ಈ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಾರೆ. ಆದರೂ, ಡಿ.ಕೆ.ಶಿವಕುಮಾರ್ ಅವರನ್ನು ‘ಸೇಫ್’ ಮಾಡಿದ್ದು ಅಂತ ಏಕೆ ಹೇಳ್ತೀರಾ? ಕಾನೂನಿನಲ್ಲಿ ಮಾಡಬಾರದು ಅಂತ ನಿಯಮ ಇದೆಯೇ? ವಿರೋಧ ಪಕ್ಷದವರಿಗೆ ಮಾಡಲು ಕೆಲಸ ಇಲ್ಲ. ಈ ಬಗ್ಗೆ ಹೆಚ್ಚು ಚರ್ಚೆ ಅನಗತ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.