ಮುಂಡರಗಿ: ‘ಯೋಗ ಕೇವಲ ಆಸನವಲ್ಲ. ಅದು ನಮ್ಮ ದೇಹ, ಮನಸ್ಸು ಹಾಗೂ ಆತ್ಮಗಳ ವ್ಯವಹಾರಗಳು ಸುಸೂತ್ರವಾಗಿ ಸಾಗಲು ನೆರವಾಗುವ ನಿಯಮಿತ ದೈಹಿಕ ಹಾಗೂ ಮಾನಸಿಕ ಸಾಧನ’ ಎಂದು ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತಾಲ್ಲೂಕು ಆಡಳಿತ, ಪತಂಜಲಿ ಯೋಗ ಸಮಿತಿ, ಹಿಮಾಲಯ ಯೋಗ ಸಮಿತಿ, ಅನ್ಮೋಲ್ ಯೋಗ ಕೇಂದ್ರ, ಚೈತನ್ಯ ಶೈಕ್ಷಣಿಕ ಸಂಸ್ಥೆ, ಅನ್ನದಾನೀಶ್ವರ ವಿದ್ಯಾ ಸಮಿತಿ, ವಿವೇಕ ಜಾಗೃತ ಬಳಗ ಹಾಗೂ ವಿವಿಧ ಇಲಾಖೆಗಳು ಬುಧವಾರ ಪಟ್ಟಣದಲ್ಲಿ ಹಮ್ಮಿಕೊಡಿಂದ್ದ ಯೋಗ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
‘ಯೋಗಕ್ಕೆ ಅದ್ಭುತ ಶಕ್ತಿಯಿದ್ದು, ಅದು ನಮ್ಮ ದೇಹ ಹಾಗೂ ಮನಸ್ಸನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಅಲೋಪತಿ, ಹೋಮಿಯೊಪತಿ ಮತ್ತು ಆಯುರ್ವೇದ ಔಷಧ ಮತ್ತು ಚಿಕಿತ್ಸೆಗಳಿಂದ ಗುಣಪಡಿಸಲಾಗದಂತಹ ಹಲವಾರು ರೋಗಗಳನ್ನು ಯೋಗದಿಂದ ಗುಣಪಡಿಸಬಹುದಾಗಿದೆ’ ಎಂದು ತಿಳಿಸಿದರು.
‘ನಿತ್ಯ ಕೇವಲ ದೈಹಿಕ ಯೋಗ ಮಾಡುವವರು ಯೋಗಿಗಳಾಗಲಾರರು. ನಾವು ನಮ್ಮ ಪಂಚೇಂದ್ರೀಯಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಗೆಲ್ಲಬೇಕು. ಅಂತಹ ಸಾಧಕರು ಮಾತ್ರ ಯೋಗಿಗಳಾಗುತ್ತಾರೆ’ ಎಂದು ತಿಳಿಸಿದರು.
ಅನ್ನದಾನೀಶ್ವರ ಸ್ವಾಮೀಜಿ ಯೋಗ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಪಟ್ಟಣದ ಅನ್ನದಾನೀಶ್ವರ ಮಠದಿಂದ ಹೊರಟ ಯೋಗ ಜಾಥಾವು ಪಟ್ಟಣದ ಗಾಂಧಿ ವೃತ್ತ, ಅಂಬಾ ಭವಾನಿ ನಗರ, ಕೇಂದ್ರ ಬಸ್ ನಿಲ್ದಾಣ, ಕಾಲೇಜು ರಸ್ತೆ, ಬೃಂದಾವನ ವೃತ್ತ, ಭಜಂತ್ರಿ ಓಣಿ, ಕೊಪ್ಪಳ ವೃತ್ತ ಮೊದಲಾದ ಭಾಗಗಳಲ್ಲಿ ಸಂಚರಿಸಿತು. ಪಟ್ಟಣದ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಬಿಇಒ ಎಚ್.ಎಂ.ಫಡ್ನೇಶಿ, ಡಾ.ಬಿ.ಜಿ.ಜವಳಿ, ಬಸವಣ್ಣೆಪ್ಪ, ಡಾ.ಪಿ.ಬಿ.ಹಿರೇಗೌಡ್ರ, ಮಂಜುನಾಥ ಇಟಗಿ, ನಾಗೇಶ ಹುಬ್ಬಳ್ಳಿ, ಮಂಜುನಾಥ ಅಳವಂಡಿ, ಮಂಜುಳಾ ಇಟಗಿ, ಮಂಗಳಾ ಸಜ್ಜನರ, ವೀಣಾ ಪಾಟೀಲ, ಶಾಂತಾ ಇಮ್ರಾಪೂರ, ನೀತಾ ಕಂಚಗಾರ, ಬಿ.ಆರ್.ಕುಲಕರ್ಣಿ, ಡಾ.ಸಚಿನ್ ಉಪ್ಪಾರ, ಕಾಶೀನಾಥ ಶಿರಬಡಗಿ, ಜಗದೀಶ ಸೋನಿ, ನಾರಾಯಣಪ್ಪ ಗುಬ್ಬಿ, ಚಂದ್ರು ಅಳವಂಡಿ, ರವಿ ಪಾಟೀಲ, ಲಕ್ಷ್ಮವ್ವ ಜಕ್ಕಲಿ, ಲಕ್ಷ್ಮಿ ಗುಬ್ಬಿ, ಪ್ರೇಮಾ ಇಲ್ಲೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.