ನರಗುಂದ: ಭೂಮಿ ಗಟ್ಟಿಯಿರುವ ಕಡೆ ಕಡಿಯಲು ಕಷ್ಟವಾಗುತ್ತಿದೆ. ಬಿಸಿಲಿನಲ್ಲಿ ಅಳತೆಗೆ ತಕ್ಕ ಗುಂಡಿ ತೋಡುವುದು ತೊಂದರೆಯಾಗುತ್ತದೆ ಎಂದು ಹೇಳುತ್ತಿದ್ದ ತಾಲ್ಲೂಕಿನ ಕೊಣ್ಣೂರಿನ ನರೇಗಾ ಕೂಲಿಕಾರರಿಗೆ ಪಿಡಿಒ ಮಂಜುನಾಥ ಗಣಿ ಅವರು ಸ್ವತಃ ತಾವೇ ಅಳತೆಗೆ ತಕ್ಕ ಗುಂಡಿ ತೋಡಿ ಮಾದರಿಯಾದರು.
ಕೊಣ್ಣೂರಿನಲ್ಲಿ 16 ದಿನಗಳಿಂದ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಯಾದ ಬದು ನಿರ್ಮಾಣ ಕೆಲಸ ನಡೆಯುತ್ತಿದೆ. ಯೋಜನೆಯಡಿ ಇಬ್ಬರು ಕೂಲಿಕಾರರು ಸೇರಿಕೊಂಡು 10 ಅಡಿ ಉದ್ದ 5 ಅಡಿ ಅಗಲ ಮತ್ತು 2 ಅಡಿ ಆಳದ ಗುಂಡಿ ತೋಡುವ ಗುರಿ ನೀಡಲಾಗಿದೆ. ಆದರೆ ಕೆಲವು ಕೂಲಿಕಾರರು ಅಳತೆಗೆ ತಕ್ಕ ಗುಂಡಿ ತೋಡುತ್ತಿರಲಿಲ್ಲ.
ಈ ವಿಚಾರ ತಿಳಿದ ಪಿಡಿಒ ಅವರು ನರೇಗಾ ತಾಂತ್ರಿಕ ಸಿಬ್ಬಂದಿ ಜೊತೆಗೂಡಿ ಕಾಮಗಾರಿ ಸ್ಥಳಕ್ಕೆ ತೆರಳಿ, ತಾವೇ ಗುದ್ದಲಿ ತಗೆದುಕೊಂಡು ಅಗೆದು ಅಳತೆಗೆ ತಕ್ಕ ಗುಂಡಿ (ಪಡಾ) ಕಡಿದರು.
‘ಅಳತೆಗೆ ತಕ್ಕ ಗುಂಡಿ ಕಡಿಯದ ಕೂಲಿಕಾರರು ಭೂಮಿ ತುಂಬಾ ಗಟ್ಟಿಯಾಗಿದೆ, ಕಡಿಯಲು ಬರುತ್ತಿಲ್ಲ ಎಂದು ಹೇಳಿದರು. ಹೀಗಾಗಿ ಖುದ್ದಾಗಿ ನಾನೇ ಕಾಮಗಾರಿ ಸ್ಥಳಕ್ಕೆ ಬಂದು ಅಳತೆಗೆ ತಕ್ಕ ಗುಂಡಿ ತೋಡಿ ತೋರಿಸಿದ್ದೇನೆ. ಅಲ್ಲದೇ ಕಡಿಮೆ ಅಳತೆಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರರಿಗೆ ಸರಿಯಾದ ಅಳೆತೆಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ’ ಎಂದು ಪಿಡಿಒ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.