ADVERTISEMENT

ವನ್ಯಜೀವಿ ಪ್ರಾಧಿಕಾರದ ಮಂಡಳಿಗೆ ನೋಟಿಸ್: ಸೊಬರದಮಠ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 13:59 IST
Last Updated 8 ಸೆಪ್ಟೆಂಬರ್ 2024, 13:59 IST
ನರಗುಂದದ ಲ್ಲಿ ನಡೆಯುತ್ತಿರುವ ನಿರಂತರ ಮಹದಾಯಿ ಧರಣಿ ವೇದಿಕೆಯಲ್ಲಿ ವೀರೇಶ ಸೊಬರದಮಠ ಮಾತನಾಡಿದರು
ನರಗುಂದದ ಲ್ಲಿ ನಡೆಯುತ್ತಿರುವ ನಿರಂತರ ಮಹದಾಯಿ ಧರಣಿ ವೇದಿಕೆಯಲ್ಲಿ ವೀರೇಶ ಸೊಬರದಮಠ ಮಾತನಾಡಿದರು   

ನರಗುಂದ: ಕೇಂದ್ರ ಸರ್ಕಾರದ ವನ್ಯಜೀವಿ ಪ್ರಾಧಿಕಾರದ ಮಂಡಳಿಯು ಮತ್ತೇ ಗೋವಾದ ಅರಣ್ಯ ಇಲಾಖೆಯ ಮನವಿ ಪುರಸ್ಕರಿಸಿದೆ. ಇದನ್ನು ವಿರೋಧಿಸಿ ವಕೀಲರ ಮೂಲಕ ರೈತ ಸೇನೆ ರಾಜ್ಯ ಘಟಕ ಶೀಘ್ರವೇ ಕಾರಣ ಕೇಳಿ ವನ್ಯಜೀವಿ ಪ್ರಾಧಿಕಾರದ ಮಂಡಳಿಗೆ ನೋಟಿಸ್ ಕಳಿಸಲಾಗುವುದು ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ಪಟ್ಟಣದಲ್ಲಿ ನಡೆಯುತ್ತಿರುವ ನಿರಂತರ ಮಹದಾಯಿ ಧರಣಿ ವೇದಿಕೆಯಲ್ಲಿ ಭಾನುವಾರ ಮಾತನಾಡಿದರು.

ವನ್ಯಜೀವಿ ಪ್ರಾಧಿಕಾರದ ಅಧ್ಯಕ್ಷರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹುಲಿಗಳ ಅರಣ್ಯ ವಲಯ ಇದೆಯೇ ಎಂದು ಪರಿಶೀಲಿಸಲು ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ನಾವು ಸಹಿತ ಅವರೊಡನೆ ಇದ್ದೆವು. ಆ ಸಂದರ್ಭದಲ್ಲಿ ಅವರಿಂದಲೇ ಇಲ್ಲಿ ಹುಲಿಗಳ ಪ್ರದೇಶ ಕಾಣುತ್ತಿಲ್ಲ ಎಂಬುದು ತಿಳಿದು ಬಂದಿದೆ. ಆದರೂ ಮತ್ತೇ ಗೋವಾದ ಅರಣ್ಯ ಇಲಾಖೆಯ ಮನವಿಗೆ ಸ್ಪಂದಿಸುವುದು ಯಾವ ನ್ಯಾಯ. ಆದ್ದರಿಂದ ಅವರಿಗೆ ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಗುರುದತ್ ಅಂಕೋಲೆಕರ ಮೂಲಕ ನೋಟಿಸ್ ನೀಡಲಾಗುವುದು ಎಂದರು.

ADVERTISEMENT

ಅವರು ಉತ್ತರ ನೀಡಬೇಕು. ಇಲ್ಲವಾದರೆ ಅವರನ್ನು ಕೋರ್ಟ್‌ಗೆ ನ್ಯಾಯಕ್ಕಾಗಿ ಕರೆಸುತ್ತೇವೆ. ಮಹದಾಯಿ ಬಗ್ಗೆ ರಾಜಕೀಯ ಪಕ್ಷಗಳಿಗೆ ಕಾಳಜಿ ಇಲ್ಲದೇ ಅದರ ಹೆಸರಿನಲ್ಲೇ ರಾಜಕೀಯ ಕೆಸರೆರಚಾಟ ನಡೆಸಿ ಹೋರಾಟ ಜೀವಂತ ಇಡಲು ನೋಡುತ್ತಿವೆ. ಇದರಿಂದ ರೈತರು ಆಕ್ರೋಶ ಗೊಂಡಿದ್ದಾರೆ. ಅದರಲ್ಲೂ ಈಚೆಗಂತೂ ಭ್ರಷ್ಟಾಚಾರ ದ ಪ್ರಕರಣಗಳನ್ನು ಪರಸ್ಪರ ಕೆದಕುತ್ತಾ ರಾಜ್ಯವೇ ಇವರ ಹೇಯ ಕೃತ್ಯಗಳಿಗೆ ಹಿಡಿಶಾಪ ಹಾಕುವಂತಾಗಿದೆ ಎಂದರು.

ಆದ್ದರಿಂದ ಈಗ ರೈತರೇ ಜಾಗೃತಗೊಳ್ಳುತ್ತಿದ್ದಾರೆ. ರಾಜ್ಯದಾದ್ಯಂತ ಮಹದಾಯಿಗಾಗಿ ಕೆಲವೇ ದಿನಗಳಲ್ಲಿ ಮತ್ತೊಂದು ಸಂಘಟನಾತ್ಮಕ ವಿಭಿನ್ನ ಹೋರಾಟ ನಡೆಸಲು ಸಿದ್ದತೆ ನಡೆದಿದೆ. ಅಕ್ಟೋಬರ್ 4ರಂದು ನರಗುಂದದಲ್ಲಿ ಬೃಹತ್ ರೈತರ ಸಮಾವೇಶ ನಡೆಯಲಿದೆ. ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ಸರ್ವಪಕ್ಷ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದ್ದಾರೆ.

ಕೇಂದ್ರ ಸಂಸದರನ್ನು ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಾಗಿದೆ. ಜಗದೀಶ್ ಶೆಟ್ಟರ್ ಹಾಗೂ ಗೋವಿಂದ ಕಾರಜೋಳರು ಅರಣ್ಯ ಸಚಿವ ಭೂಪೇಂದ್ರ ಯಾದವರಿಗೆ ಪತ್ರ ಬರೆದಿದ್ದಾರೆ. ಎಲ್ಲ ಸಂಸದರು ಮಹದಾಯಿಗೆ ಪಕ್ಷ ಭೇಧ ಮರೆತು ಒತ್ತಡ ಹಾಕಬೇಕು. ಅದರಲ್ಲೂ ಕೇಂದ್ರ ಮಂತ್ರಿ ಪ್ರಲ್ಹಾದ ಜೋಶಿಯವರು ಹುಬ್ಬಳ್ಳಿ ಧಾರವಾಡ ದ ಕುಡಿಯುವ ನೀರಿನ ಪರಿಸ್ಥಿತಿ ಯನ್ನಾದರೂ ಅರಿತು ಮಹದಾಯಿ, ಕಳಸಾಬಂಡೂರಿ ಯೋಜನೆ ಅನುಷ್ಠಾನ ಕ್ಕೆ ಹೆಚ್ಚಿನ ಪ್ರಯತ್ನ ಮಾಡಬೇಕು. ಆದರೆ ಅವರು ಪ್ರಯತ್ನ ಮಾಡದಿರುವುದು ನಮ್ಮ ದುರ್ದೈವ ವೇ ಅಗಿದೆ. ಅವರಿಗೆ ರೈತರ ಹಿತ ಬೇಕಾಗಿಲ್ಲ ಎಂದು ಸೊಬರದಮಠ ಆರೋಪಿಸಿದರು. ಏನೇ ಆಗಲಿ ಮುಂದಿನ ಹೋರಾಟ. ವಿಭಿನ್ನವಾಗಿರುತ್ತದೆ ಎಂದರು.

ಫಕೀರಪ್ಪ ಜೋಗಣ್ಣವರ, ಚಂದ್ರಗೌಡ ಪಾಟೀಲ, ಹನಮಂತ ಸರನಾಯ್ಕರ, ಪರಮೇಶ್ವರ, ವಾಸು ಚವ್ಹಾಣ, ಎಸ್.ಕೆ.ಗಿರಿಯಣ್ಣವರ ಹಾಗೂ ರೈತ ಸೇನೆ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.