ADVERTISEMENT

ಹಾವೇರಿ: ಬಿಜೆಪಿ ಟಿಕೆಟ್‌ಗೆ ದುಬೈನ ಶಶಿಧರ ನಾಗರಾಜಪ್ಪ ಆಕಾಂಕ್ಷಿ

ಬಿಜೆಪಿ ಟಿಕೆಟ್‌ಗೆ ದುಬೈನ ಶಶಿಧರ ನಾಗರಾಜಪ್ಪ ಆಕಾಂಕ್ಷಿ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 9 ಮಾರ್ಚ್ 2024, 23:51 IST
Last Updated 9 ಮಾರ್ಚ್ 2024, 23:51 IST
ಶಶಿಧರ ನಾಗರಾಜಪ್ಪ
ಶಶಿಧರ ನಾಗರಾಜಪ್ಪ   

ಗದಗ: ಹಾವೇರಿ–ಗದಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆನಂದಸ್ವಾಮಿ ಗಡ್ಡದೇವರಮಠ ಸ್ಪರ್ಧಿಸಲಿದ್ದು, ಬಿಜೆಪಿಯಿಂದ ಯಾರು ಸ್ಪರ್ಧಿಸುವರು ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ನಡೆದಿದೆ.

ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳ ಪೈಕಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಸರು ಒಂದೆಡೆ ಕೇಳಿ ಬರುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಆರು ತಿಂಗಳಿನಿಂದ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಡಾ. ಮಹೇಶ ನಾಲವಾಡ ಮತ್ತು ಡಾ. ಶೇಖರ ಸಜ್ಜನರ ಕೂಡ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಇದರ ನಡುವೆ ಅನಿವಾಸಿ ಭಾರತೀಯ (ಎನ್‌ಆರ್‌ಐ) ಶಶಿಧರ ನಾಗರಾಜಪ್ಪ ಸಹ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ADVERTISEMENT

ದುಬೈನಲ್ಲಿ ಕೆಲಸ ಮಾಡುವ ಶಶಿಧರ ನಾಗರಾಜಪ್ಪ, ದುಬೈ ಕರ್ನಾಟಕ ಸಂಘದ ಅಧ್ಯಕ್ಷರೂ ಹೌದು. ಅಲ್ಲಿನ ಕೆಲ ಸಂಘಟನೆಗಳ ಪ್ರಮುಖ ಹುದ್ದೆಯಲ್ಲಿದ್ದಾರೆ. ದುಬೈಗೆ ಭೇಟಿ ನೀಡುವ ಬಿಜೆಪಿ ಮುಖಂಡರ ಆದರ–ಆತಿಥ್ಯ ವಹಿಸಿಕೊಳ್ಳುತ್ತಾರೆ. 22 ವರ್ಷಗಳ ಸಾಗರೋತ್ತರ ಬಿಜೆಪಿ ಜೊತೆಗಿನ ಒಡನಾಟದಿಂದ ಅವರು ಹಲವು ಹಿರಿಯ ನಾಯಕರ ವಿಶ್ವಾಸ ಗಳಿಸಿದ್ದು, ಈ ಹಿನ್ನೆಲೆಯಲ್ಲಿ ಅವರು ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದಾರೆ. 

‘ಅನಿವಾಸಿ ಭಾರತೀಯರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ಬಿಜೆಪಿ ಮಾಡಿಕೊಟ್ಟರೆ, ಎನ್‌ಆರ್‌ಐಗಳಿಗೂ ಒಬ್ಬ ಪ್ರತಿನಿಧಿ ಸಿಕ್ಕಂತಾಗುತ್ತದೆ. ಹೊರದೇಶದಲ್ಲಿನ ಭಾರತೀಯರನ್ನು ದೇಶಕ್ಕೆ ವಾಪಸ್‌ ಸೆಳೆಯಬೇಕು. ಅವರ ಜ್ಞಾನ ಮತ್ತು ಅವರ ಬಂಡವಾಳ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡರೆ, ದೇಶಕ್ಕೆ ಒಳ್ಳೆಯದಾಗುತ್ತದೆ’ ಎಂದು ಶಶಿಧರ ನಾಗರಾಜಪ್ಪ ತಿಳಿಸಿದರು.

‘ಬಿಜೆಪಿಯಿಂದ ಬೊಮ್ಮಾಯಿ ಅವರಿಗೆ ಟಿಕೆಟ್‌ ಸಿಕ್ಕರೆ, ಅವರನ್ನು ಬೆಂಬಲಿಸುವೆ. ಅವರು ಸ್ಪರ್ಧಿಸದಿದ್ದರೆ, ನನಗೆ ಅವಕಾಶ ಮಾಡಿಕೊಡಲು ಕೋರುವೆ. ಸ್ಪರ್ಧೆಯಲ್ಲಿರುವ ಎಲ್ಲರೂ ಸಾಕಷ್ಟು ವರ್ಷಗಳಿಂದ ಬಿಜೆಪಿಗೆ ದುಡಿದವರು. ಬುದ್ಧಿವಂತರು ಮತ್ತು ಅರ್ಹರು. ಆದೆ, ಪಕ್ಷದ ತೀರ್ಮಾನವೇ ಅಂತಿಮ’ ಎಂದು ಅವರು ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕು ಎಂಬ ದೂರದೃಷ್ಟಿ ಹೊಂದಿರುವೆ. ನನಗೆ ಹಾವೇರಿ– ಗದಗ ಕ್ಷೇತ್ರದ ಜತೆಗೆ ಬಳಗ ಬಾಂಧವ್ಯ ಚೆನ್ನಾಗಿದೆ. ಅದಕ್ಕಾಗಿ ಈ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಬಯಸಿರುವೆ
ಶಶಿಧರ ನಾಗರಾಜಪ್ಪ ಎನ್‌ಆರ್‌ಐ ದುಬೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.