ನರಗುಂದ: ಕನ್ನಡ ಪತ್ರಿಕೆ, ಪತ್ರಿಕೋದ್ಯಮಕ್ಕೆ 179 ವರ್ಷಗಳ ಇತಿಹಾಸವಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದ ಜೊತೆಗೆ ಇಲ್ಲಿಯವರೆಗೂ ಸಮಾಜದ ಅಂಕು, ಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕೆಗಳ ಕೊಡುಗೆ ಅಪಾರ ಎಂದು ಎಸ್ವೈಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ವಿ.ಪಾಟೀಲ ಹೇಳಿದರು.
ಪಟ್ಟಣದ ಯಡೆಯೂರ ಸಿದ್ದಲಿಂಗೇಶ್ವರ ಪ್ರಥಮ ದರ್ಜೆ ಹಾಗೂ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳು ಜ್ಞಾನದ ಕಣಜವಾಗಿವೆ. ಅವುಗಳನ್ನು ಹೆಚ್ಚೆಚ್ಚು ಓದುವ ಮೂಲಕ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿಗೆ ಸಿದ್ದಗೊಳ್ಳಲು ಪತ್ರಿಕೆಗಳ ಓದು ಅಗತ್ಯವಿದೆ. ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಇಂದು ವೇಗವಾಗಿ ಬೆಳೆಯುತ್ತಿವೆ. ಆದರೆ ಮುದ್ರಣ ಮಾಧ್ಯಮ ಕೊಡುವ ಮಾಹಿತಿ ಸ್ಮರಣೆ ಶಕ್ತಿ ಹೆಚ್ಚಲು ಕಾರಣವಾಗಿದೆ. ಮುಂದೆ ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳು ನಿತ್ಯ ಒಂದು ಪತ್ರಿಕೆಯನ್ನಾದರೂ ಓದಿ ಜ್ಞಾನವನ್ನು ಪಡೆದು ಜೀವನದ ಗುರಿ ತಲುಪುವಂತೆ ಪಾಟೀಲ ಸಲಹೆ ಮಾಡಿದರು.
ಪ್ರಾಚಾರ್ಯ ಆರ್.ಬಿ.ಪಾಟೀಲ ಮಾತನಾಡಿ, ಪತ್ರಿಕಾರಂಗವು ತನ್ನದೇ ಇತಿಹಾಸ ಹೊಂದಿದೆ. ಸಮಾಜ ಹಾಗೂ ಜೀವನ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎಲ್ಲರೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕದ ಸದಸ್ಯ ಬಸವರಾಜ ಹಲಕುರ್ಕಿ ಮಾತನಾಡಿ, ಮುದ್ರಣ ಮಾಧ್ಯಮಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಪತ್ರಿಕೆಗಳು ಸಮಾಜದ ಕಣ್ಣಾಗಿ ಕೆಲಸ ಮಾಡುತ್ತವೆ. ಎಲ್ಲರೂ ಪತ್ರಿಕೆ ಖರೀದಿಸಿ ಓದಿ ಬೆಳೆಸುವ ಕೆಲಸ ನಡೆಯಬೇಕು ಎಂದು ಹೇಳಿದರು.
ಎಸ್ವೈಎಸ್ ಸಂಸ್ಥೆ ಅಧ್ಯಕ್ಷ ವೀರನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ನಾಯಕತ್ವ ತರಬೇತಿ ಶಿಬಿರದಲ್ಲಿ ಉತ್ತಮ ಸೇವೆ ನೀಡಿದ ಎನ್ಎಸ್ಎಸ್ ಸ್ವಯಂಸೇವಕರಿಗೆ ಸುಶ್ಮಿತಾ ಹೂಗಾರ, ಕೀರ್ತಿ ಕೊಳ್ಳಿಯವರ, ಮಲ್ಲಿಕಾರ್ಜುನ ಹೂಗಾರ, ವಿನಾಯಕ ಸಿದ್ದಾಪುರರವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪತ್ರಕರ್ತರಾದ ಎಸ್.ಜಿ.ತೆಗ್ಗಿನಮನಿ, ರಾಜು ಹೊಸಮನಿ, ರಮೇಶ ಮೋಟೆ,ಎಸ್.ಎಸ್.ಖಾನಪ್ಪಗೌಡರ, ಕಿರಣ ರಾಯರ,ಬಸವರಾಜ ಹಲಕುರ್ಕಿ ಅವರನ್ನು ಸನ್ಮಾನಿಸಲಾಯಿತು.
ಎಸ್.ವಿ.ಕೋಟಿ ಪ್ರಾರ್ಥಿಸಿದರು. ಎಸ್ ಆರ್ ಮೇಟಿ ಸ್ವಾಗತಿಸಿದರು. ದಾವಲಬಿ ನದಾಫ್ ಪರಿಚಯಿಸಿದರು. ಎಂ.ಈ.ವಿಶ್ವಕರ್ಮ ಗ್ರಂಥಪಾಲಕಿ ವಿ.ಎಸ್.ಪಾರ್ವತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.