ಡಂಬಳ: ನಿರಂತರವಾಗಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಪರಿಣಾಮ ಈಗಾಗಲೇ ಕೊಯ್ಲು ಮಾಡಿರುವ ಹಾಗೂ ಕೊಯ್ಲು ಮಾಡಬೇಕಾದ ಈರುಳ್ಳಿ ಹಾಗೂ ಮೆಕ್ಕೆಜೋಳ ಜಮೀನಿನಲ್ಲೇ ಉಳಿದಿದೆ. ಮಳೆ ಮುಂದುವರಿದರೆ ಬೆಳೆ ಕೊಳೆಯುವ ಆತಂಕ ರೈತರನ್ನು ಕಾಡುತ್ತಿದೆ.
ಡಂಬಳ ಹೋಬಳಿ ಕೇಂದ್ರ ಸ್ಥಾನ ಸೇರಿದಂತೆ ಇತರೆ ಗ್ರಾಮದಲ್ಲಿಯುವ ಈರುಳ್ಳಿ ಬೆಳೆದ ರೈತರು ಧಾರಕಾರ ಮಳೆ ಪರಿಣಾಮ ಸಂಕಷ್ಟ ಎದುರಿಸುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತಿದೆ. ಸ್ವಲ್ಪ ದಿನ ಮಳೆ ಬಿಡುವು ನೀಡಿದರೆ ರೈತರಿಗೂ ಬೆಳೆ ಕಟಾವು ಮಾಡಿ ಸ್ವಚ್ಛ ಮಾಡಿ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ರೈತ ಮಹೇಶ ಸಿದ್ದಪ್ಪ ಗಡಗಿ.
2024-25 ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ಅಂದಾಜು 3,338 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ ಎನ್ನುತ್ತಾರೆ ಮುಂಡರಗಿ ತಾಲ್ಲೂಕು ಹಿರಿಯ ತೋಟಗಾರಿಕೆ ಅಧಿಕಾರಿ ಮಹ್ಮದ ರಫಿ ಎಂ.ತಾಂಬೋಟಿ.
ಮುಂಡರಗಿ ತಾಲ್ಲೂಕಿನಲ್ಲಿ 2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅಂದಾಜು 21,895 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ ಎನ್ನುತ್ತಾರೆ ತಾಲ್ಲೂಕು ಕೃಷಿ ಅಧಿಕಾರಿ ಪ್ರಾಣೇಶ ಹಾದಿಮನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.