ಗದಗ: ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ಅನುಷ್ಟಾನಗೊಳಿಸಲು ಆಗ್ರಹಿಸಿ ಮುಂಡರಗಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸದಸ್ಯರು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವೇದಿಕೆಯ ಸಂಚಾಲಕ ಬಸವರಾಜ ಯಲ್ಲಪ್ಪ ನವಲಗುಂದ, ‘2014ರ ರೈಲ್ವೆ ಮುಂಗಡ ಪತ್ರದಲ್ಲಿ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ಪರಿಷ್ಕೃತ ಪಟ್ಟಿಯಲ್ಲಿ ಮಂಜೂರಾಗಿ 10 ವರ್ಷಗಳು ಕಳೆದಿವೆ. 2019ರಲ್ಲಿ ಪರಿಷ್ಕೃತ ಸರ್ವೆ ಮಾಡಿ ಗದಗದಿಂದ ಹರಪನಹಳ್ಳಿವರೆಗೂ (94 ಕಿಮೀ) ರೈಲು ಮಾರ್ಗ ನಿರ್ಮಾಣಕ್ಕೆ ಅಂದಾಜು ವೆಚ್ಚ ₹813.14 ಕೋಟಿ ಬೇಕು ಎಂದು ಹೇಳಿ ಕಾಯ್ದಿರಿಸಿ ಐದು ವರ್ಷಗಳು ಗತಿಸಿ ಹೋಗಿವೆ’ ಎಂದು ಹೇಳಿದರು.
‘ನಮ್ಮ ಹೋರಾಟಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ರೈಲ್ವೆ ಯೋಜನೆಯನ್ನು ಅಧ್ಯಯನ ಮಾಡಲು ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒಂದು ವರ್ಷ ಗತಿಸಿ ಹೋಗಿದೆ. ಆದರೂ ಸರ್ಕಾರಗಳು ಈ ಬೃಹತ್ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಳ್ಳದೇ ಮೀನಮೇಷ ಎಣಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಮುಂಡರಗಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ ಉಗ್ರವಾಗಿ ಖಂಡಿಸುತ್ತದೆ’ ಎಂದು ಹೇಳಿದರು.
ಮಂಜುನಾಥ ಹುಬ್ಬಳ್ಳಿ, ಶರಣಪ್ಪ ಹೊಂಬಳಗಟ್ಟಿ, ರವಿ ಪಾಟೀಲ, ಬಸಪ್ಪ ತಿಮ್ಮಪ್ಪ ವಡ್ಡರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.