ADVERTISEMENT

ಲಕ್ಷ್ಮೇಶ್ವರ: ಮಹಿಳೆ ಬದುಕು ಬೆಳಗಿದ ‘ಸಂಜೀವಿನಿ’

ಕೂಲಿ ಕೆಲಸ ಮಾಡುತ್ತಿದ್ದ ನೇತ್ರಾವತಿ ಮಂಜುನಾಥ; ಸಿದ್ಧ ಉಡುಪು ಮಾರಾಟದಲ್ಲಿ ಯಶಸ್ಸು

ನಾಗರಾಜ ಎಸ್‌.ಹಣಗಿ
Published 23 ಅಕ್ಟೋಬರ್ 2024, 5:32 IST
Last Updated 23 ಅಕ್ಟೋಬರ್ 2024, 5:32 IST
ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿಯಲ್ಲಿ ತಮ್ಮ ಸಿದ್ಧ ಉಡುಪು ಮಾರಾಟ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ನೇತ್ರಾವತಿ ಮಹೇಂದ್ರಕರ
ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿಯಲ್ಲಿ ತಮ್ಮ ಸಿದ್ಧ ಉಡುಪು ಮಾರಾಟ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ನೇತ್ರಾವತಿ ಮಹೇಂದ್ರಕರ   

ಲಕ್ಷ್ಮೇಶ್ವರ: ಗ್ರಾಮೀಣ ಜೀವನೋಪಾಯ ಇಲಾಖೆಯ ಸಂಜೀವಿನಿ ಯೋಜನೆ (ಎನ್ಆರ್‌ಎಲ್ಎಂ) ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಇರುವ ಮಹಿಳಾ ಗುಂಪುಗಳನ್ನು ರಚಿಸಿ ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಲು ಸಹಕಾರಿ ಆಗಿದೆ. ತಾಲ್ಲೂಕಿನ ಶಿಗ್ಲಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ನೇತ್ರಾವತಿ ಮಂಜುನಾಥ ಮಹೇಂದ್ರಕರ ಅವರು ಸಂಜೀವಿನಿ ಯೋಜನೆಯ ಮೂಲಕ ಯಶಸ್ಸು ಸಾಧಿಸಿದ್ದಾರೆ.

ಸಂಜೀವಿನಿ ಯೋಜನೆಯಡಿ ಸಿಬ್ಬಂದಿ ಮಾರ್ಗದರ್ಶನಲ್ಲಿ 2017-18ನೇ ಸಾಲಿನಲ್ಲಿ ಗ್ರಾಮದ ತಮ್ಮ ಮನೆಯ ಅಕ್ಕ ಪಕ್ಕದ 10 ಮಹಿಳೆಯರು ಸೇರಿ ನೇತ್ರಾವತಿ ಮಹೇಂದ್ರಕರ ಅವರ ಮುಂದಾಳತ್ವದಲ್ಲಿ ಕೊಟ್ರೇಶ್ವರ ಮಹಿಳಾ ಸ್ವ-ಸಹಾಯ ಗುಂಪು ಕಟ್ಟಿದ್ದರು.

ನಂತರ ಗುಂಪಿನಲ್ಲಿ 10 ಸಾವಿರ ಆಂತರಿಕ ಸಾಲ ಪಡೆದು ಒಂದು ಹೊಲಿಗೆ ಯಂತ್ರ ಖರೀದಿಸಿ ಬಟ್ಟೆಗಳನ್ನು ಹೊಲಿದು ಜೀವನ ನಡೆಸುತ್ತ ತಿಂಗಳಿಗೆ ₹1000-₹1200 ಆದಾಯ ಗಳಿಸುತ್ತಿದ್ದರು. ನಂತರ ಗ್ರಾಮ ಪಂಚಾಯ್ತಿಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಸಮುದಾಯ ಬಂಡವಾಳ ನಿಧಿಯ ಮೂಲಕ ಆರಂಭದಲ್ಲಿ ₹1.5 ಲಕ್ಷ ಸಾಲ ಪಡೆದು ಬಟ್ಟೆ ವ್ಯಾಪಾರ ಪ್ರಾರಂಭ ಮಾಡಿದರು. ಸಂಜೀವಿನಿ ಯೋಜನೆಯಡಿ ಆಯೋಜಿಸುವ ಸ್ವ-ಸಹಾಯ ಸಂಘಗಳ ವಸ್ತುಪ್ರದರ್ಶನ ಮಾರಾಟ ಮೇಳದಲ್ಲಿ ಭಾಗಿಯಾಗಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು.

ADVERTISEMENT

ಶಿಗ್ಲಿ ಗ್ರಾಮ ಪಂಚಾಯ್ತಿಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ 2021-22ನೇ ಸಾಲಿನಲ್ಲಿ ಆಯ್ಕೆ ಆಗುವ ಮೂಲಕ ಗ್ರಾಮದ ಬಡ ಮಹಿಳೆಯರಿಗೆ ಸ್ವ-ಸಹಾಯ ಗುಂಪು ರಚನೆ, ಉಳಿತಾಯ ಮನೋಭಾವ ಮೂಡಿಸುವ ಮೂಲಕ ಅವರಿಗೆ ಸಲಹೆ, ಮಾರ್ಗದರ್ಶ ನೀಡಿದರು. ಸಧ್ಯ ಒಕ್ಕೂಟದಲ್ಲಿ 125 ಗುಂಪು ಇದ್ದು, ಸಾವಿರಾರು ಬಡ ಮಹಿಳೆಯರನ್ನು ಒಕ್ಕೂಟದ ವ್ಯಾಪ್ತಿಗೆ ಬರುವಂತೆ ಮಾಡಿದ ಕೀರ್ತಿ ಅವರದ್ದು.

ಉತ್ತಮ ಆದಾಯ: ಸಂಜೀವಿನಿ ಯೋಜನೆ ಮೂಲಕ ಆರಂಭವಾದ ವ್ಯಾಪಾರ ಪ್ರಸ್ತುತ ಚಿಕ್ಕ ಮಕ್ಕಳ ಸಿದ್ದ ಉಡುಪುಗಳು ಮತ್ತು ಶಿಗ್ಲಿ ಸೀರೆ ಮಾರಾಟ ಮಾಡುವ ಮೂಲಕ ತಿಂಗಳಿಗೆ ₹18 ಸಾವಿರದಿಂದ ₹20 ಸಾವಿರ ಆದಾಯ ಗಳಿಸುವ ಮೂಲಕ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ದೆಹಲಿ ಗಣರಾಜೊತ್ಸವದಲ್ಲಿ ಭಾಗಿ

ಸಂಜೀವಿನಿ ಯೋಜನೆ ಮೂಲಕ ಕಳೆದ ಜನವರಿ 26ರಂದು ಗಣರಾಜೊತ್ಸವ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದ ಆಯ್ಕೆ ಆಗುವ ಮೂಲಕ ದೆಹಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆ ಎಂಬ ಹೆಗ್ಗಳಿಕೆಗೆ ನೇತ್ರಾವತಿ ಪಾತ್ರರಾಗಿದ್ದಾರೆ.

ಹೊರರಾಜ್ಯಕ್ಕೂ ಬಟ್ಟೆ ಸರಬರಾಜು

ಮನೆ ಯಜಮಾನ ಮಂಜುನಾಥ ಮಹೇಂದ್ರಕರ ಅವರ ಸಹಕಾರದಲ್ಲಿ ಸರ್ಕಾರದ ವಿವಿಧ ಯೋಜನೆಯ ಸೌಲಭ್ಯಗಳನ್ನು ಪಡೆಯುವ ಮೂಲಕ ಕಿರು ಗಾರ್ಮೆಂಟ್ಸ್‌ ಪ್ರಾರಂಭ ಮಾಡಿ 5 ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ಮಕ್ಕಳ ವಿವಿಧ ಸಿದ್ದ ಉಡುಪುಗಳನ್ನು ತಯಾರಿಸುವ ಮೂಲಕ ರಾಜ್ಯ ಮತ್ತು ಬೇರೆ ರಾಜ್ಯಗಳಿಗೆ ನಿರಂತರವಾಗಿ ಬಟ್ಟೆ ಸರಬರಾಜು ಮಾಡುತ್ತಾರೆ. ಮೇಳಗಳಲ್ಲಿ ಭಾಗಿ: ಸಂಜೀವಿನಿ ಯೋಜನೆಯಡಿ ಬೃಹತ್ ಪ್ರಮಾಣದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳಲ್ಲಿ ರಾಜ್ಯದ ಬೆಳಗಾವಿ ಬೆಂಗಳೂರು ಮೈಸೂರು ಮುಂಬೈ ಮತ್ತು ದೆಹಲಿ ಸೇರಿದಂತೆ ತಮ್ಮ ಗಾರ್ಮೇಂಟ್ಸ್‌ನಲ್ಲಿ ಸಿದ್ಧಪಡಿಸಿದ ಮಕ್ಕಳ ವಿವಿಧ ಸಿದ್ದ ಉಡುಪುಗಳ ಮಾರಾಟ ಮಳಿಗೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಮಹಿಳೆಯರು ಉತ್ಪಾದನೆ ಮಾಡಿದ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವುದರಿಂದ ಮಹಿಳೆಯರು ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರಲು ಸಹಕಾರಿ
–ನೇತ್ರಾವತಿ ಮಹೇಂದ್ರಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.