ಗದಗ: ನಗರದ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು.
ಒಂದನೇ ತರಗತಿಯ ವಿದ್ಯಾರ್ಥಿ ಸರ್. ಸಿ.ವಿ. ರಾಮನ್ ಅವರಂತೆ ವೇಷಭೂಷಣ ಧರಿಸಿ ಅವರ ಜೀವನ, ಸಾಧನೆಗಳ ಕುರಿತು ಮಕ್ಕಳಿಗೆ ತಿಳಿಯಪಡಿಸಿದನು.
‘ಎಲ್ಲ ಪ್ರಯೋಗಗಳು ಕಲಿಕೆಯ ಅನುಭವಗಳನ್ನು ನೀಡುತ್ತವೆ. ಅದರಿಂದ ಆದ ತಪ್ಪುಗಳನ್ನು ತಿದ್ದಿಕೊಂಡು ಪುನಃ ಪ್ರಯತ್ನಿಸಿದಾಗ ಅಂತಿಮ ಪರಿಹಾರ ಸಿಗುತ್ತದೆ. ವಿಜ್ಞಾನವೆಂದರೆ ಬೇರೇನೂ ಅಲ್ಲ, ಅದು ನಮ್ಮ ದೈನಂದಿನ ಬಳಕೆಯ ವಸ್ತುವಿನಲ್ಲಿದೆ’ ಎಂದು ತಿಳಿಸಿದನು.
ಪ್ರಾಥಮಿಕ ಹಂತದಿಂದ ಪ್ರೌಢಶಾಲೆ ವಿದ್ಯಾರ್ಥಿಗಳೆಲ್ಲರೂ ಶಿಕ್ಷಕರಿಂದ ಮಾರ್ಗದರ್ಶನ ಪಡೆದು ವಿಜ್ಞಾನದ ವಿವಿಧ ಪ್ರಯೋಗಗಳನ್ನು ಮಾಡಿ ತೋರಿಸಿದರು. ಅಲ್ಲದೇ ದೈನಂದಿನ ದಿನಗಳಲ್ಲಿ ವಿಜ್ಞಾನವು ಹೇಗೆ ನಮ್ಮಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉಪ ಪ್ರಾಂಶುಪಾಲೆ ಹಾಗೂ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಶೋಭಾ ಮಾಲಿಪಾಟೀಲ ಅವರು ಥಾಮಸ್ ಅಲ್ವಾ ಎಡಿಸನ್ ಅವರ ಜೀವನ ಯಶೋಗಾಥೆಯ ಬಗ್ಗೆ ವಿವರಿಸಿದರು.
ಪ್ರಾಂಶುಪಾಲೆ ವಿಜಯಲಕ್ಷ್ಮೀ ಪುರಾಣಿಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್. ಸಿ.ವಿ.ರಾಮನ್ ಅವರ ಸಾಧನೆ, ಬೆಳಕಿನ ವಕ್ರೀಭವನದ ಬಗ್ಗೆ ಅವರ ಸಿದ್ದಾಂತವನ್ನು ಕುರಿತು ಮಕ್ಕಳಿಗೆ ತಿಳಿಸಿದರು.
ಪ್ರತಿಯೊಂದು ಮಗುವು ದೇಶದ ಒಬ್ಬೊಬ್ಬ ವಿಜ್ಞಾನಿ ಎಂದು ಹೇಳಿ ಮಕ್ಕಳಲ್ಲಿ ಉತ್ಸಾಹ ತುಂಬಿದರು.
ಸಂಸ್ಥೆಯ ಚೇರ್ಮನ್ ಅಶೋಕ ಜೈನ್, ಅಧ್ಯಕ್ಷ ವಿನೋದ ಗಾದಿಯಾ, ಕಾರ್ಯದರ್ಶಿ ಸಚಿನ್ ಜೈನ್, ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ್ ಜೈನ್ ಹಾಗೂ ಸಮಿತಿಯ ಸರ್ವ ಸದಸ್ಯರು, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದವು ಎಲ್ಲ ವಿಜ್ಞಾನ ಶಿಕ್ಷಕರು ಹಾಗೂ ವಿಜ್ಞಾನಿಗಳಿಗೆ ಶುಭ ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.