ಶಿರಹಟ್ಟಿ: ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆಯ ಹರಾಜು ಪ್ರಕ್ರಿಯೆಯನ್ನು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಮಳಿಗೆಗಳ ಮುಂಭಾಗದಲ್ಲಿ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ಕುಂದು ಕೊರತೆ ನಿವಾರಣೆ ಸಮಿತಿ ವತಿಯಿಂದ ತಹಶೀಲ್ದಾರರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಕ್ಬರಸಾಬ್ ಯಾದಗಿರಿ ಹಾಗೂ ನಾಗರಾಜ ಲಕ್ಕುಂಡಿ, ‘ಪಟ್ಟಣದಲ್ಲಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಇದ್ದು, ಇದರ ಹಳೇ ಮತ್ತು ನೂತನ ಸೇರಿ ಒಟ್ಟು ಒಂಬತ್ತು ಮಳಿಗೆಗಳ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆಯನ್ನು ಲಕ್ಷ್ಮೇಶ್ವರದಲ್ಲಿ ಇದೇ ಜುಲೈ 6ರ ಶನಿವಾರ ಮಾಡಲಾಗುತ್ತಿದೆ. ಸ್ಥಳೀಯವಾಗಿಯೇ ವಾಣಿಜ್ಯ ಮಳಿಗೆಗಳು ಇರುವುದರಿಂದ ಈ ಪ್ರಕ್ರಿಯೆಯನ್ನು ಪಟ್ಟಣದಲ್ಲಿನ ಉಪ ಮಾರುಕಟ್ಟೆಯ ಮಳಿಗೆಗಳ ಮುಂಭಾಗದಲ್ಲಿಯೇ ಮಾಡಬೇಕು. ಈಗಾಗಲೇ 60 ಜನ ಅರ್ಜಿ ಸಲ್ಲಿಸಿದ್ದು, ಕೂಡಲೇ ತಮ್ಮ ನಿರ್ಧಾರವನ್ನು ಬದಲಿಸಬೇಕು’ ಎಂದು ಆಗ್ರಹಿಸಿದರು.
ಅಂಗವಿಕಲರ, ಮಹಿಳೆಯರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸ್ತುತ ಟೆಂಡರ್ ಪ್ರಕ್ರಿಯೆಯನ್ನು ಶಿರಹಟ್ಟಿ ಪಟ್ಟಣದಲ್ಲಿ ನಡೆಸಬೇಕು. ತಾಲ್ಲೂಕು ಕೇಂದ್ರವಾದ ಶಿರಹಟ್ಟಿಯನ್ನು ಹೀಗೆ ಹಿಂದಿಕ್ಕಲು ಹುನ್ನಾರ ನಡೆಯುತ್ತಾ ಬಂದಿದ್ದು, ಇದು ಸಲ್ಲದು. ಕೂಡಲೇ ತಮ್ಮ ನಿರ್ಣಯವನ್ನು ಬದಲಿಸಿ ಪಟ್ಟಣದಲ್ಲಿಯೇ ಈ ಪ್ರಕ್ರಿಯೆ ನಡೆಸಬೇಕು. ಇಲ್ಲದೇ ಹೋದಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಫಕೀರೇಶ ರಟ್ಟಿಹಳ್ಳಿ, ರಾಮಣ್ಣ ಕಂಬಳಿ, ಬಸವರಾಜ ವಡವಿ, ಅಲ್ಲಾಭಕ್ಷಿ ನಗಾರಿ, ಆರ್.ಕೆ.ಗೊಡೆಣ್ಣವರ, ಎಸ್.ಕೆ.ಟಪಾಲ, ನಾಗರಾಜ ಧನವೆ, ಎ.ಎಸ್.ಕೋಳಿ, ದುದ್ದುಸಾಬ ನಗಾರಿ, ಡಿ.ಟಿ.ಪೂಜಾರ ಸೇರಿದಂತೆ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.