ಗಜೇಂದ್ರಗಡ: ಪಟ್ಟಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಗಜೇಂದ್ರಗಡ ಪುರಸಭೆ ಸಹಯೋಗದಲ್ಲಿ ಪ್ರಧಾನಮಂತ್ರಿ ಆವಸ್ ಯೋಜನೆಯಡಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ನಿರ್ಮಿಸುತ್ತಿರುವ ಬಹುತೇಕ ಮನೆಗಳ ನಿರ್ಮಾಣ ಕಾಮಗಾರಿ ಕುಂಟತ್ತಾ ಸಾಗುತ್ತಿದ್ದು, ಕಾಮಗಾರಿ ಕಳಪೆಯಾಗಿದೆ. ಸ್ವಂತ ಮನೆ ಹೊಂದಬೇಕು ಎಂಬ ಕನಸು ಹೊತ್ತಿದ್ದ ಸಾಮಾನ್ಯ ಜನರ ಬದುಕು ಅತಂತ್ರವಾಗಿದೆ.
ಕೊಳಚೆ ನಿರ್ಮೂಲನಾ ಮಂಡಳಿಯಿಂದ 300 ಮನೆಗಳ ನಿರ್ಮಾಣಕ್ಕೆ 2021ರಲ್ಲಿ ಅನುಮೋದನೆ ದೊರೆತು 2022ರ ಜನವರಿಯಲ್ಲಿ ಪಟ್ಟಣದ ಜನತಾ ಪ್ಲಾಟ್ನಲ್ಲಿ ಸಂಸದ ಶಿವಕುಮಾರ ಉದಾಸಿ ಹಾಗೂ ಅಂದಿನ ಶಾಸಕ ಕಳಕಪ್ಪ ಬಂಡಿ ಶಂಕುಸ್ಥಾಪನೆ ನೆರವೇರಿಸಿದ್ದರು. ಅವುಗಳಲ್ಲಿ 159 ಮನೆಗಳ ನಿರ್ಮಾಣಕ್ಕೆ ಕಾಮಗಾರಿ ಆರಂಭವಾಗಿದ್ದು, ಗುತ್ತಿಗೆದಾರ ಎಸ್.ಐ.ಡೊಣ್ಣುರ ಮನೆಗಳ ನಿರ್ಮಾಣ ಕಾಮಗಾರಿಯ ಜವಾಬ್ದಾರಿ ಪಡೆದಿದ್ದಾರೆ. ಆದರೆ ಕಾಮಗಾರಿ ಆರಂಭವಾಗಿ ಎರಡು ವರ್ಷವಾಗುತ್ತಿದ್ದರೂ ಮನೆ ನಿರ್ಮಾಣ ಕಾಮಗಾರಿ ಮುಗಿದಿಲ್ಲ.
ಈಗಾಗಲೇ ಕಾಮಗಾರಿಯಲ್ಲಿ ಹಲವರಿಗೆ ತುಂಡು ಗುತ್ತಿಗೆ ನೀಡಿದ್ದು, ಗುತ್ತಿಗೆದಾರರು ಬದಲಾಗಿದ್ದಾರೆ. ತಮಗೆ ತೋಚಿದಂತೆ ಮನೆ ನಿರ್ಮಿಸುತ್ತಿದ್ದಾರೆ. ಇದಕ್ಕಿಂತ ಮೊದಲಿದ್ದ ಮನೆಗಳೇ ಚೆನ್ನಾಗಿದ್ದವು ಎನ್ನುತ್ತಾರೆ ಫಲಾನುಭವಿಗಳು.
ಕೆಲ ಫಲಾನುಭವಿಗಳು ಅನುದಾನದ ಜೊತೆಗೆ ತಮ್ಮ ಸ್ವಂತ ಹಣ ಖರ್ಚು ಮಾಡಿ ಮನೆ ಕಟ್ಟಿಸಿಕೊಳ್ಳುತ್ತಿದ್ದಾರೆ. ‘ಮನೆ ಕಟ್ಟಿಸಿಕೊಡುವ ಯೋಜನೆಯ ಬದಲು ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಿದರೆ, ಅದರೊಂದಿಗೆ ಮತ್ತಷ್ಟು ಹಣ ಸೇರಿಸಿ ತಮಗೆ ಬೇಕಾದಂತೆ ಉತ್ತಮ ಮನೆ ನಿರ್ಮಿಸಿಕೊಳ್ಳಬಹುದು’ ಎನ್ನುವುದು ಹಲವರ ಆಗ್ರಹವಾಗಿದೆ.
‘ಮನೆ ನಿರ್ಮಾಣಕ್ಕೆ ಸರಿಯಾಗಿ ಅಡಿಪಾಯ ಹಾಕಿಲ್ಲ, ಕಾಲಂಗಳಿಗೆ ಕಬ್ಬಿಣದ ಸರಳುಗಳಿಗೆ ರಿಂಗ್ ಹಾಕದೆ, ಸರಿಯಾದ ಪ್ರಮಾಣದಲ್ಲಿ ಸಿಮೆಂಟ್, ಮರಳು, ಜಲ್ಲಿ ಕಲ್ಲು ಹಾಕದೆ ಬೇಕಾಬಿಟ್ಟಿಯಾಗಿ ನಿರ್ಮಿಸಿದ್ದಾರೆ. ಕಟ್ಟಡಕ್ಕೆ ಬಳಸಿದ ಸಿಮೆಂಟ್ ಇಟ್ಟಿಗೆಗಳು ಕಳಪೆಯಾಗಿವೆ. ಬೇಕಾಬಿಟ್ಟಿಯಾಗಿ ಮನೆ ನಿರ್ಮಿಸಿ ಕೊಡುವುದಾದರೆ ನಾವು ವಂತಿಕೆ ಕಟ್ಟಿ ಸರ್ಕಾರದ ಸಹಾಯಧನ, ಬ್ಯಾಂಕ್ ಸಾಲ ಏಕೆ ಮಾಡಬೇಕು? ಯಾಕಾದರೂ ನಾವು ಫಲಾನುಭವಿಯಾದೆವು ಎನ್ನುವಂತಾಗಿದೆʼ ಎಂದು ಫಲಾನುಭವಿಗಳು ಬೇಸರ ವ್ಯಕ್ತಪಡಿಸಿದರು.
ಮನೆ ನಿರ್ಮಾಣದ ಜವಾಬ್ದಾರಿಯನ್ನು ಕೊಳಚೆ ನಿರ್ಮೂಲನಾ ಮಂಡಳಿ ವಹಿಸಿಕೊಂಡಿದೆ. ಅಧಿಕಾರಿಗಳಿಗೆ ಗುಣಮಟ್ಟದ ಕಾಮಗಾರಿ ನಡೆಸಲು ಶೀಘ್ರ ಕಾಮಗಾರಿ ಮುಗಿಸಲು ಸೂಚಿಸಲಾಗುವುದುಬಸವರಾಜ ಬಳಗಾನೂರ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಗಜೇಂದ್ರಗಡ
ಗಜೇಂದ್ರಗಡದಲ್ಲಿ 300ರಲ್ಲಿ 87 ಮನೆಗಳು ಚಾವಣಿ ಹಂತಕ್ಕೆ ಹಾಗೂ 26 ಮನೆಗಳು ಸ್ಲ್ಯಾಬ್ ಹಂತದಲ್ಲಿವೆ. ಕಳೆ ಕಾಮಗಾರಿ ಆರೋಪದ ಹಿನ್ನೆಲೆ 2 ಬಾರಿ ಸಭೆ ನಡೆಸಿ ಕಾಮಗಾರಿ ಪರಿಶೀಲಿಸಲಾಗಿದೆ. ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆಪ್ರವೀಣಕುಮಾರ ಎಚ್. ಮುಖ್ಯನಿರ್ವಹಣಾ ಅಧಿಕಾರಿ ಕೊಳಚೆ ನಿರ್ಮೂಲನಾ ಮಂಡಳಿ ಗದಗ
2 ವರ್ಷದ ಹಿಂದೆ ಸುಮಾರು ₹1 ಲಕ್ಷ ವಂತಿಕೆ ಕಟ್ಟಿ ಕೊಳಗೇರಿ ಮಂಡಳಿಯ ಫಲಾನುಭವಿಯಾಗಿ ಮನೆ ಕಟ್ಟಿಸುತ್ತಿದ್ದೇನೆ. ಆದರೆ ಮನೆ ಸಂಪೂರ್ಣ ಕಳಪೆಯಾಗಿದೆ. ಆ ಮನೆಯಲ್ಲಿ ವಾಸ ಮಾಡುವುದು ಹೇಗೆ ಎಂಬ ಆತಂಕ ಕಾಡುತ್ತಿದೆರಾಮಪ್ಪ ತಳವಾರ ಫಲಾನುಭವಿ ಗಜೇಂದ್ರಗಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.